ಚಿಕ್ಕಬಳ್ಳಾಪುರ: ಒಂದು ರೂಪಾಯಿ ಹಳೆಯ ಕಾಯಿನ್ ಮಾರಲು ಹೋದ ವ್ಯಾಪಾರಿಯೋರ್ವ ಆನ್ಲೈನ್ ವಂಚಕನಿಂದ ಮೋಸ ಹೋಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಚಿಕ್ಕಬಳ್ಳಾಪುರ ನಗರದ ಶಂಕರಮಠ ಏರಿಯಾದ ನಿವಾಸಿ ಅರವಿಂದ್ ಎಂದು ಗುರುತಿಸಲಾಗಿದ್ದು, ನಗರದ ಬಜಾರ್ ರಸ್ತೆಯಲ್ಲಿ ಗಿಫ್ಟ್ ಸೆಂಟರ್ ಅಂಗಡಿ ಇಟ್ಟುಕೊಂಡಿದ್ದರು. ಹಳೆಯ 1 ರೂಪಾಯಿ ಕಾಯಿನ್ ಕೊಟ್ಟರೆ, 58 ಲಕ್ಷ ರೂಪಾಯಿ ಕೊಡುತ್ತೇವೆ ಎಂಬ ಆನ್ಲೈನ್ ವಂಚಕನ ಮಾತು ನಂಬಿದ ಅರವಿಂದ್ ತಮ್ಮ ಬಳಿ ಇದ್ದ ಹಳೆ ಕಾಲದ 1 ರೂಪಾಯಿಯ ಕಾಯಿನ್ ಮಾರಾಟ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ
ಸ್ವತಃ ಅರವಿಂದ್ ಅವರೇ ತಮ್ಮ ಬಳಿ ಇದ್ದ ಒಂದು ರೂಪಾಯಿಯ ಹಳೆಯ ಕಾಯಿನ್ಗಳ ಮಾರಾಟ ಮಾಡುವ ಐಡಿಯಾ ಮಾಡಿ, ಆನ್ಲೈನ್ನಲ್ಲಿ ಹಳೆಯ ಕಾಯಿನ್ಗಳನ್ನು ಖರೀದಿ ಮಾಡುವವರ ಮೊಬೈಲ್ ನಂಬರ್ಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಮೂರ್ನಾಲ್ಕು ನಂಬರ್ಗಳಿಗೆ ಕರೆ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಹಳೆಯ ಕಾಯಿನ್ ಖರೀದಿ ಮಾಡುತ್ತೇನೆ ಎಂದು ವಾಟ್ಸಾಪ್ ಮುಖಾಂತರ ಕಾಯಿನ್ ಫೋಟೋ ಕಳುಹಿಸಿಕೊಂಡು, ಈ ಕಾಯಿನ್ಗೆ 58 ಲಕ್ಷದ 38 ಸಾವಿರದ 808 ರೂಪಾಯಿ ಕೊಡುವುದಾಗಿ ಹೇಳಿದ್ದಾನೆ.
ಇದನ್ನು ನಂಬಿದ ಅರವಿಂದ್ ಕಾಯಿನ್ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ಇದಕ್ಕೆ ಪ್ರೊಸೆಸಿಂಗ್ ಫೀಸ್, ಆ ಫೀಸ್, ಈ ಫೀಸ್ ಕೊಡಬೇಕು ಅಂತ ಅರವಿಂದ್ ಬಳಿಯೇ ಆನ್ಲೈನ್ ವಂಚಕ ಸರಿಸುಮಾರು ಆಗಷ್ಟು, ಈಗಷ್ಟು ಅಂತ 26 ಲಕ್ಷ ವಸೂಲಿ ಮಾಡಿದ್ದಾರೆ. ಅಲ್ಲದೇ ಆನ್ಲೈನ್ ವಂಚಕನಿಗೆ ಹಣ ನೀಡುವುದಕ್ಕೆ ಅರವಿಂದ್ ತಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟಿದ್ದಾರೆ. ಸಾಲದು ಅಂತ ಹಲವರ ಬಳಿ ಕೈ ಸಾಲ ಸಹ ಮಾಡಿದ್ದಾರೆ. ಆದರೆ ಇತ್ತ ಹಣ ಪಡೆದ ಆನ್ಲೈನ್ ವಂಚಕ ಮಾತ್ರ ಪಡೆದ ಹಣ ವಾಪಾಸ್ ಮಾಡಿಲ್ಲ. ಬದಲಾಗಿ ಮತ್ತಷ್ಟು ಹಣ ಕೊಡುವಂತೆ ಅರವಿಂದ್ಗೆ ಒತ್ತಡ ಹಾಕಿದ್ದಾನೆ. ಇದನ್ನೂ ಓದಿ: ಇಲಿ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಯುಪಿ ಸಚಿವ – ಚಿಕಿತ್ಸೆ ಬಳಿಕ ಡಿಸ್ಚಾರ್ಜ್
ಇದರಿಂದ ಏನು ಮಾಡಬೇಕೆಂದು ದಿಕ್ಕು ತೋಚದೇ ಅರವಿಂದ್ ಚಿಕ್ಕಬಳ್ಳಾಪುರ ನಗರದಿಂದ ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಳಿ ನಿರ್ಜನ ಜಾಗಕ್ಕೆ ತೆರಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿನ ಕಾರಣ ಎಲ್ಲವನ್ನೂ ಸಹ ಡೆತ್ ನೋಟ್ ಬರೆದಿಟ್ಟಿದ್ದು, ಡೆತ್ ನೋಟ್ನಿಂದ ಅರವಿಂದ್ ಸಾವಿನ ಸತ್ಯ ಬಯಲಾಗಿದೆ. ಸದ್ಯ ಈ ಸಂಬಂಧ ಇದೀಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.