ಲಕ್ನೋ: ಕೊರೊನಾ ವೈರಸ್ ಹರಡದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವೊಂದು ಮನಕಲಕುವ ಘಟನೆಗಳು ನಡೆದಿದೆ. ಇದರಲ್ಲಿ ಆಗ್ರಾದಲ್ಲಿ ನಡೆದ ಘಟನೆ ಕೂಡ ಒಂದು. ರಸ್ತೆಯಲ್ಲಿ ಚೆಲ್ಲಿದ ಹಾಲಿಗಾಗಿ 4 ಶ್ವಾನಗಳು ಹಾಗೂ ವ್ಯಕ್ತಿ ಮುಗಿಬಿದ್ದ ಘಟನೆ ನೋಡಿದರೆ ಎಂಥವರ ಮನಸ್ಸು ಕರಗದೇ ಇರದು.
ಹೌದು. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲೂ ಆಹಾರ ಸಿಗುತ್ತಿಲ್ಲ. ಕೆಲವು ಮಾನವೀಯ ಹೃದಯವಿದ್ದವರು ಬಡವರಿಗೆ ಮೂರು ಹೊತ್ತು ಆಹಾರ ಹಂಚುತ್ತಿದ್ದಾರೆ. ಆದರೂ ಕೆಲವಡೆ ನೀರು, ಆಹಾರ ಇಲ್ಲದೆ ಪ್ರಾನಿಗಳು ಸಾವನ್ನಪುತ್ತಿವೆ. ಈ ಮಧ್ಯೆ ಹಸಿವಿನಿಂದ ಕಂಗೆಟ್ಟು ಒಂದು ಕಡೆ ಬಡ ವ್ಯಕ್ತಿ, ಇನ್ನೊಂದೆಡೆ 4 ಶ್ವಾನಗಳು ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ದೃಶ್ಯ ನೋಡಿದಾಗ ಕಣ್ಣಂಚಲ್ಲಿ ನೀರು ಬರುತ್ತದೆ.
ಈ ಘಟನೆ ಸೋಮವಾರ ಬೆಳಗ್ಗೆ ತಾಜ್ ಮಹಲ್ ನಿಂದ 6 ಕಿ.ಮಿ ದೂರದಲ್ಲಿ ನಡೆದಿದೆ. ಹಾಲು ತುಂಬಿದ್ದ ಟ್ಯಾಂಕರ್ ರಸ್ತೆಗೆ ಮಗುಚಿ ಬಿದ್ದಿದೆ. ಪರಿಣಾಮ ಹಾಲು ರಸ್ತೆಯಲ್ಲೆ ಚೆಲ್ಲಿದ್ದು, ಹೊಳೆಯಂತೆ ಹರಿದಿದೆ. ಕೂಡಲೇ ಅಲ್ಲೇ ಇದ್ದ ಶ್ವಾನಗಳು ಹಾಗೂ ಹಸಿವಿನಿಂದ ಬಳಲಿದ್ದ ವ್ಯಕ್ತಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಒಂದೆಡೆ ಶ್ವಾನಗಳು ಹಾಲನ್ನು ನೆಕ್ಕುತ್ತಿದ್ದರೆ ಇನ್ನೊಂದೆಡೆ ವ್ಯಕ್ತಿ ತಾನು ಒಂದು ಸಣ್ಣ ಮಣ್ಣಿನ ಪಾತ್ರೆಯಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟನ್ನು ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಇದರ ಸಂಪೂರ್ಣ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಹಸಿವು ಜನರನ್ನು ಯಾವ ಮಟ್ಟಕ್ಕೆ ಎಳೆದೊಯ್ಯುತ್ತದೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ.
Lockdown Impact:
इंसान और जानवर साथ साथ दूध पीने लगे।
आज अगरा के रामबाग चौराहे पर एक दूध वाले की दूध की टंकी गिर गयी।फिर क्या हुआ खुद देखिए। pic.twitter.com/OWvNg8EFIe— Kamal khan (@kamalkhan_NDTV) April 13, 2020