ಬಾಗಲಕೋಟೆ: ಲೋಕ ಕಲ್ಯಾಣಾರ್ಥವಾಗಿ ಖಾವಿಧಾರಿ ಮಾತೆಯೊಬ್ಬರು ಇಲಕಲ್ ಪಟ್ಟಣದ ಹೊರವಲಯದಲ್ಲಿ ನಿರಂತರ 24 ದಿನಗಳ ಕಾಲ ಅನ್ನ ಆಹಾರ ಬಿಟ್ಟು ನಿರ್ಜನ ಪ್ರದೇಶದಲ್ಲಿ ಜಪಕ್ಕೆ ಕುಳಿತಿದ್ದಾರೆ.
ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗುಗಳ್ ಗ್ರಾಮದ ಮಹಾದೇವಮ್ಮ ಇಲಕಲ್ ಪಟ್ಟಣಕ್ಕೆ ಬಂದ ವೇಳೆ ತಮ್ಮ ಇಚ್ಚಾನುಸಾರ ಭಕ್ತರನ್ನ ಸೇರಿಸಿ 24 ದಿನಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತಿದ್ದಾರೆ.
ಸುತ್ತ ನಾಲ್ಕು ಕಡೆಗೆ ಗೋಡೆಯನ್ನು ನಿರ್ಮಿಸಿಕೊಂಡು ಒಳಗಡೆ ಧ್ಯಾನಕ್ಕೆ ಕುಳಿತುಕೊಂಡಿದ್ದಾರೆ. ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ ಚಳಗೇರಿ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರೆದ ಭಕ್ತರಿಗೆ ಮಾಹಿತಿ ನೀಡಿ, ಜಪದ ಕೊನೆಯ ದಿನ ಪಂಚಪೀಠಾಧೀಶರ ಸಮ್ಮುಖದಲ್ಲಿ ಜಪ ಮಂಗಳವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಮಹಾದೇವಮ್ಮ ಆಶಯದಂತೆ ಭಕ್ತರು ರಂಭಾಪುರಿ ಶ್ರೀಗಳ ಸಮ್ಮುಖದಲ್ಲಿ ಜನವರಿ 26ರಂದು ಅವರ ಜಪ ಮಂಗಳಗೊಳಿಸಲು ಮುಂದಾಗಿದ್ದಾರೆ. ಒಟ್ಟಾರೆ ಅನ್ನ ಆಹಾರ ತ್ಯಜಿಸಿ ಮಾತೆಯೊಬ್ಬರು ಜಪಕ್ಕೆ ಕುಳಿತ್ತಿದ್ದು ಭಕ್ತ ಸಮೂಹದಲ್ಲಿ ಅಚ್ಚರಿ ಮೂಡಿಸಿದೆ.