ರಾಯಚೂರು: ಲವ್ ಕೇಸರಿ ವಿವಾದ ಹಾಗೂ ಪ್ರಚೋದನಕಾರಿ ಭಾಷಣ ಪ್ರಕರಣದ ಆರೋಪಿಗಳಾದ ಶ್ರೀರಾಮಸೇನೆ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ್ ಬಾವಿಯನ್ನು ನಗರದ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 10 ರಂದು ಶ್ರೀರಾಮನವಮಿ ಹಿನ್ನೆಲೆ ಶ್ರೀರಾಮಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ “ಲವ್ ಕೇಸರಿ” ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ ನೀಡಿತ್ತು. ಹಿಂದೂಗಳ ಮೇಲೆ ದಾಳಿ ಮಾಡಿದವರನ್ನು ಕೊಚ್ಚಿ ಹಾಕಿ ನಾವಿದ್ದೀವಿ ಎಂದು ಪ್ರಚೋದನಕಾರಿಯಾಗಿ ರಾಜಾಚಂದ್ರ ರಾಮನಗೌಡ ಭಾಷಣ ಮಾಡಿದ್ದ. ವೇದಿಕೆ ಮೇಲೆ ಖಡ್ಗ ಹಿಡಿದು ಯುವಕರನ್ನು ಪ್ರಚೋದನೆ ಮಾಡಿದ್ದ ಆರೋಪದಲ್ಲಿ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ
ಮಣಿಕಾಂತ್ ಎಂಬುವವರು ಮತೀಯ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಭಾಷಣ ಮಾಡಿ, ಅನ್ಯ ಧರ್ಮೀಯರಲ್ಲಿ ಭಯಹುಟ್ಟಿಸುವಂತ ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗೋವಾದಲ್ಲಿ ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ವೈದ್ಯಕೀಯ ತಪಾಸಣೆ ಹಾಗೂ ವಿಚಾರಣೆ ನಂತರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮ ಜಯಂತಿ ವೇಳೆ ಹಿಂಸಾಚಾರ – ಯುಪಿಯಲ್ಲಿ ಕಟ್ಟೆಚ್ಚರ