ಬೆಂಗಳೂರು: ಬಹುಕೋಟಿ ಲಾಟರಿ ಹಗರಣದಲ್ಲಿ ಐಜಿಪಿ ಅಲೋಕ್ಕುಮಾರ್ಗೆ ಕ್ಲೀನ್ಚಿಟ್ ನೀಡುತ್ತಿದ್ದಾರೆ. ಹಗರಣದ ಕುರಿತಂತೆ ಈಗಾಗಲೇ ತನಿಖೆಯನ್ನು ನಡೆಸಿರೋ ಸಿಬಿಐ ಅಧಿಕಾರಿಗಳು ವರದಿಯನ್ನು ತಯಾರು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಲಾಟರಿ ಹಗರಣದ ಸೂತ್ರಧಾರಿ ಪಾರಿರಾಜನ್ ಜೊತೆಯಲ್ಲಿ ನಿಕಟ ಸಂಪರ್ಕ ಹೊಂದಿದ್ದಾರೆ ಮತ್ತು ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳಲಾಗಿತ್ತು. ಖುದ್ದು ಅಲೋಕ್ಕುಮಾರ್ ಪಾರಿರಾಜನ್ ನನ್ನ ಹಿತೈಷಿ ಅಂತ ಹೇಳಿಕೆ ನೀಡಿದ್ರು. ಈ ಹೇಳಿಕೆಯ ನಂತರ ಸರ್ಕಾರ ಅಲೋಕ್ ಕುಮಾರ್ ಅವರನ್ನು ಅಮಾನತಿನಲ್ಲಿ ಇಟ್ಟಿತ್ತು.
ಬಳಿಕ ಸಿಬಿಐ ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಅನ್ನಲಾಗಿರೋ ಎಲ್ಲರನ್ನು ವಿಚಾರಣೆ ಮಾಡಿದ್ರು. ಈ ವೇಳೆ ಪಾರಿರಾಜನ್ ಮತ್ತು ಅಲೋಕ್ಕುಮಾರ್ ನಡುವೆ ಬರೀ ಸ್ನೇಹ ಇತ್ತು ಅನ್ನೋ ವಿಚಾರ ತಿಳಿದಿದ್ದು, ಈ ಹಿನ್ನೆಲೆಯಲ್ಲಿ ಕ್ಲೀನ್ಚಿಟ್ ನೀಡುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಐಜಿಪಿ ಪದ್ಮನಯನ ಅವರ ಮೇಲೆಯೇ ಪ್ರಕರಣ ದಾಖಲಿಸಬೇಕು ಅಂತ ಅಭಿಪ್ರಾಯಪಟ್ಟಿದೆ. ವಿಜಯನಗರದ ಸರ್ಕಾರಿ ಮುದ್ರಣಾಲಯದಲ್ಲಿ ಲಾಟರಿಗಳನ್ನು ತೆಗೆದುಕೊಂಡು ಹೋಗಿ ಪಾರಿರಾಜನ್ ಮನೆಯಲ್ಲಿ ಇಟ್ಟು ಆರೋಪಿ ಬಂಧನ ಮಾಡಿದ್ದಾರೆ ಅನ್ನೋ ಮಾಹಿತಿಯ ಮೇರೆಗೆ ಪದ್ಮನಯನ ಅವರ ವಿರುದ್ಧವೇ ಪ್ರಕರಣ ದಾಖಲಿಸೋ ಎಲ್ಲಾ ಸಾಧ್ಯತೆಗಳಿವೆ. ಸದ್ಯ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಕೆಲವೇ ದಿನಗಳ ನಂತ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ.