ತುಮಕೂರು: ಜಿಲ್ಲೆಯ ಶಿರಾದ ಅರಸು ಹೋಟೆಲ್ ನಲ್ಲಿ ಉಪಾಹಾರ ಸೇವಿಸುತ್ತಿದ್ದ ಗ್ರಾಹಕರೊಬ್ಬರ ತಟ್ಟೆಯಲ್ಲಿ ಹಲ್ಲಿ ಪತ್ತೆಯಾಗಿದೆ.
ರಮೇಶ್ ಎಂಬವರು ವೆಜ್ ಫ್ರೈಡ್ ರೈಸ್ ಆರ್ಡರ್ ಮಾಡಿ ಸೇವಿಸುತ್ತಿದ್ದರು. ಈ ವೇಳೆ ಇತರ ತರಕಾರಿಗಳೊಂದಿಗೆ ಹಲ್ಲಿಯನ್ನು ಫ್ರೈ ಮಾಡಲಾಗಿತ್ತು. ತಟ್ಟೆಯಲ್ಲಿ ಸತ್ತ ಹಲ್ಲಿಯನ್ನು ಕಂಡು ಗ್ರಾಹಕ ರಮೇಶ್ ಆತಂಕಗೊಂಡಿದ್ದರು.
ರಮೇಶ್ ಸೇರಿದಂತೆ ಇತರ 20 ಜನರು ರವಿಶಂಕರ್ ಗುರೂಜಿಯನ್ನು ಭೇಟಿ ಮಾಡಲು ಮಹಾರಾಷ್ಟ್ರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಹೋಟೆಲ್ನಲ್ಲಿ ಉಪಾಹಾರ ಸೇವಿಸಲು ಹೋಗಿದ್ದರು. ರಮೇಶ್ ಫ್ರೈಡ್ ರೈಸ್ ಆರ್ಡರ್ ಮಾಡಿದರೆ, ಉಳಿದ ಮಂದಿ ಬೇರೆ ಬೇರೆ ತಿಂಡಿ ಆರ್ಡರ್ ಮಾಡಿ ಅದನ್ನು ಸೇವಿಸುತ್ತಿದ್ದರು.
ಆಹಾರದಲ್ಲಿ ಹಲ್ಲಿ ಸಿಕ್ಕ ಪರಿಣಾಮ ಆಕ್ರೋಶಗೊಂಡ ಗ್ರಾಹಕರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆತಂಕಗೊಂಡ ಕೆಲವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ.