ಬಾಲಿವುಡ್ ನಟರಿಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿರುವ ಕಾರಣದಿಂದಾಗಿ ಮಹಾರಾಷ್ಟ್ರ ಸರಕಾರ ತಲೆಕೆಡಿಸಿಕೊಂಡು ಕೂತಿದೆ. ಸಲ್ಮಾನ್ ಖಾನ್ ಮಾತ್ರವಲ್ಲ ಅನುಪಮ್ ಕೇರ್, ಅಕ್ಷಯ್ ಕುಮಾರ್ (Akshay Kumar) ಸೇರಿದಂತೆ ಹಲವು ಕಲಾವಿದರಿಗೆ ನಾನಾ ಕಡೆಗಳಿಂದ ಜೀವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಭದ್ರತೆ (Security) ಕೊಡಲು ಸರಕಾರ ಚಿಂತನೆ ನಡೆಸಿದೆ. ಅದರಲ್ಲೂ ಸಲ್ಮಾನ್ ಖಾನ್ (Salman Khan) ಅವರಿಗೆ ಸಿಧು ಮೂಸೆವಾಲ ಹತ್ಯೆಕಾರರು ಬೆದರಿಕೆ ಹಾಕಿರುವುದರಿಂದ ಅವರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಲು ಮಹಾರಾಷ್ಟ್ರ ಸರಕಾರ (Maharashtra Govt) ಸಿದ್ಧವಾಗಿದೆ.
ಕಳೆದ ಮೇ 29 ರಂದು ಪಂಜಾಬ್ ಖ್ಯಾತ ಗಾಯಕ ಸಿಧು ಮೂಸೆವಾಲ ಅವರನ್ನು ಹತ್ಯೆ ಮಾಡಲಾಯಿತು. ಈ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಇದೆ ಎಂದು ಹೇಳಲಾಯಿತು. ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಪ್ಲ್ಯಾನ್ ಮಾಡಿರುವ ಆತಂಕಕಾರಿ ವಿಚಾರ ಹೊರಬಂತು. ಅಲ್ಲದೇ, ಇದೇ ಗ್ಯಾಂಗ್ ಸಲ್ಮಾನ್ ಖಾನ್ ತಂದೆಗೂ ಪತ್ರ ಬರೆದು ಜೀವ ಬೆದರಿಕೆ ಹಾಕಿತ್ತು. ಈ ಬೆದರಿಕೆಯ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಯನ್ನು ನೀಡಲು ಮುಂದಾಗಿದೆ. ಇದನ್ನೂ ಓದಿ:ಮಲಯಾಳಂಗೆ ಹಾರಿದ ರಾಜ್ ಬಿ. ಶೆಟ್ಟಿ : ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಾಯಕಿ
ಈಗಾಗಲೇ ಸಲ್ಮಾನ್ ಖಾನ್ ಗೆ ಗನ್ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವೈ ಪ್ಲಸ್ ಭದ್ರತೆಯನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಶ್ರೇಣಿಯ ಭದ್ರತೆಯಲ್ಲಿ ನಾಲ್ಕು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಇರುತ್ತಾರೆ. ಸಲ್ಮಾನ್ ಖಾನ್ ಗೆ ವೈ ಪ್ಲಸ್ ಭದ್ರತೆ ನೀಡಿದರೆ, ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ (Anupam Kher) ಅವರಿಗೆ ಎಕ್ಸ್ ಕೆಟಗರಿ ಭದ್ರತೆ ನೀಡಲು ಸರಕಾರ ಸೂಚಿಸಿದೆ. ಅಲ್ಲದೇ ಭದ್ರತಾ ಸಿಬ್ಬಂದಿ ವೆಚ್ಚವನ್ನು ನಟರೇ ಭರಿಸಬೇಕು ಎಂದು ಸೂಚಿಸಿದೆ.