ಬೆಳಗಾವಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ (Eranna Kadadi) ಅವರ ಕಾರಿಗೆ (Car) ಮುತ್ತಿಗೆ ಹಾಕಿದ್ದು, ಗಂಭೀರವಾದ ಘಟನೆಯಲ್ಲ, ರಾಜಕೀಯ ಜೀವನದಲ್ಲಿ ಇವೆಲ್ಲ ಸಾಮಾನ್ಯ ಘಟನೆಗಳು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಡಾಡಿಗೆ ಎಲ್ಲರೂ ಸೇರಿ ಸಾಂತ್ವನ ಹೇಳಿದ್ದೇವೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಇದು ಗಂಭೀರವಾದ ಘಟನೆ ಏನಿಲ್ಲ. ರಾಜಕೀಯದಲ್ಲಿ ಇವೆಲ್ಲ ಸಾಮಾನ್ಯವಾಗಿದೆ. ಸಹಜವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ತೇಜೋವಧೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ಮಾತನಾಡಿದ್ದು ಯಾರು? ಹೀಗೆ ಮಾತನಾಡು ಅಂತಾ ನಾವೇನೂ ಚೀಟಿ ಕೊಟ್ಟು ಕಳುಹಿಸಿದ್ವಾ?ಅವರೇ ಮಾತನಾಡಿದ್ದಾರೆ. ಅದು ಹಿಂದೂ ಧರ್ಮಕ್ಕೆ ಅವಹೇಳನ ಆಗಿದೆ ಎನ್ನುವ ಕಾರಣಕ್ಕೆ ಅನೇಕ ಕಡೆ ಪ್ರತಿಭಟನೆಗಳು ಆಗುತ್ತಿವೆ. ನಮಗೆ ಅವರನ್ನು ತೇಜೋವಧೆ ಮಾಡಬೇಕು ಅಂತಾ ಏನಿಲ್ಲ. ಅವರೇ ಮಾತನಾಡಿ ವಿವಾದ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ತಿಗಣೆಯನ್ನ ಮೈಮೇಲೆ ಬಿಟ್ಟಗೊಂಡಂತೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಮುತ್ತಿಗೆ
ಹೇಳಿಕೆ ವಾಪಸ್ ಪಡೆದಿದ್ದು ಇದಕ್ಕೆ ತೆರೆ ಬಿದ್ದಿದೆ ಎಂದು ನಾನು ಭಾವಿಸಿದ್ದೇನೆ. ಜಾರಕಿಹೊಳಿ ಬೆಂಬಲಿಗರ ಧರಣಿ ಬಗ್ಗೆ ನಾನೇನು ಹೇಳಲ್ಲ ಎಂದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಬಾಲಚಂದ್ರ, ರಮೇಶ್ ಖಂಡನೆ ಮಾಡಿಲ್ಲ. ಏಕೆಂದರೆ ಸಹೋದರ ಹೇಳಿಕೆಯಿಂದ ಮುಜುಗರ ಆಗಿರಬೇಕು. ಹೀಗಾಗಿ ಮೌನವಾಗಿ ಇದ್ದಾರೆ. ಪಕ್ಷದ ಪ್ರತಿಭಟನೆ ಬಗ್ಗೆ ಯಾರು ಟೀಕೆ ಮಾಡಿಲ್ಲ. ನಾನು ಪ್ರತಿಭಟನೆಗೆ ಭಾಗಿಯಾಗಿಲ್ಲ ಎಂದರು. ಇದನ್ನೂ ಓದಿ: ಗಾಂಜಾ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿ ಸಾವು – ಸಿಐಡಿ ತನಿಖೆಗೆ ಶಿಫಾರಸು