ಶಿವಮೊಗ್ಗ/ಬೆಂಗಳೂರು: ನಿರಂತರ ಮಳೆಯಿಂದಾಗಿ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಿ, ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವಂತೆ ಇಂಧನ ಸಚಿವ ಸುನಿಲ್ ಕುಮಾರ್ ಸೂಚನೆ ನೀಡಿದ್ದಾರೆ.
ಆಗುಂಬೆ ಘಾಟಿಯ ಮೂರು, ನಾಲ್ಕು ಮತ್ತು ಹತ್ತನೇ ಸುತ್ತಿನ ಮಧ್ಯದಲ್ಲಿ ಭೂಕಸಿತ ಸಂಭವಿಸಿದ ಸ್ಥಳದಲ್ಲಿ ತಕ್ಷಣ ಪರಿಹಾರ ಕಾರ್ಯ ಪ್ರಾರಂಭಿಸುವಂತೆ ಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಅವರು, ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ರಾತ್ರಿಯಿಂದಲೇ ಈ ಭಾಗದಲ್ಲಿ ಸಂಚಾರ ಸಮಸ್ಯೆ ಸೃಷ್ಟಿಯಾಗಿದ್ದು, ಸಂಜೆಯೊಳಗಾಗಿ ಯಥಾಸ್ಥಿತಿ ಕಾಪಾಡುವುದಕ್ಕೆ ಪ್ರಯತ್ನಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಪತಿ, ಪತ್ನಿ ಮತ್ತು ಅವಳು – ಗರ್ಲ್ಫ್ರೆಂಡ್ ಜೊತೆಗಿನ ಟ್ರಿಪ್ ಮುಚ್ಚಿಡಲು ಪಾಸ್ಪೋರ್ಟ್ ಪುಟ ಹರಿದು ತಗ್ಲಾಕೊಂಡ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಗುಡ್ಡ ಕುಸಿತದಿಂದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಶಿವಮೊಗ್ಗದಿಂದ ಉಡುಪಿ ಮಂಗಳೂರಿಗೆ ಸಂಪರ್ಕಿಸುವ ರಸ್ತೆ ಬಂದ್ ಆಗಿತ್ತು. ಸ್ಥಳದಲ್ಲಿ ಪಿಡಬ್ಲ್ಯೂಡಿ ಹಾಗೂ ಅರಣ್ಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಸೋಮೇಶ್ವರ ಚಕ್ ಪೋಸ್ಟ್ ನ ಸಮೀಪದದ 3 ನೇ ತಿರುವು ನಲ್ಲಿ ಗುಡ್ಡ ಕುಸಿತ ಆಗಿತ್ತು. ಭಾರೀ ಗಾತ್ರದ ಮರ ಹಾಗೂ ಮಣ್ಣು ರಸ್ತೆಗೆ ಬಿದ್ದು ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿತ್ತು. ಸದ್ಯ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ಮಧ್ಯಾಹ್ನದ ವೇಳೆ ತೆರವು ಕಾರ್ಯಾಚರಣೆ ಮುಗಿಯುವ ನಿರೀಕ್ಷೆ ಇದೆ.