ಮಂಡ್ಯ: ಅಸೆಂಬ್ಲಿ ಚುನಾವಣೆಗೆ ವರ್ಷಗಳು ಬಾಕಿ ಇರುವಂತೆ ಬಿಜೆಪಿ ಪಕ್ಷ ಬಲವರ್ಧನೆಗೆ ಮುಂದಾಗಿದೆ. ಇದೀಗ ಹಳೆ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ನಾಯಕರು ಮಾಜಿ ಐಆರ್ಎಸ್ ಅಧಿಕಾರಿ ಅಶ್ವಿನ್ ಗೌಡ ಅವರಿಗೆ ಗಾಳ ಹಾಕಿದೆ.
ಹಳೆ ಮೈಸೂರು ಭಾಗದಲ್ಲಿ ಪಕ್ಷದ ಶಕ್ತಿ ಬಗ್ಗೆ ಸ್ರೀಕೆಟ್ ರಿಪೋರ್ಟ್ ಪಡೆದಿರುವ ಗೃಹ ಸಚಿವ ಅಮಿತ್ ಶಾ, ರಾಜ್ಯ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಈ ಹಿಂದೆ ಹೊರಬಿದ್ದಿತ್ತು. ಬೆಂಗಳೂರು ನಗರ ಸೇರಿ ಹಳೆ ಮೈಸೂರಿನ 89 ಕ್ಷೇತ್ರಗಳಲ್ಲಿ 10ರಲ್ಲಿ ಅಷ್ಟೇ ಬಿಜೆಪಿ ಸ್ಟ್ರಾಂಗ್ ಇದೆ. ಕ್ಷೀಣವಾಗಿರುವ 43 ಕ್ಷೇತ್ರಗಳಲ್ಲಿ ಪಕ್ಷ ಸುಧಾರಿಸಲು ಬೇರೆ ಪಕ್ಷದವರನ್ನು ಸೆಳೆಯಲು ಬಿಜೆಪಿ ತಯಾರಿ ಆರಂಭಿಸಿದೆ. ರಾಜ್ಯ ಬಿಜೆಪಿ ನಾಯಕರು ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಚಾಮರಾಜನಗರ, ರಾಮನಗರಲ್ಲಿ ಆಪರೇಷನ್ ಕಮಲ ಆರಂಭಿಸುತ್ತಿರುವ ಬಗ್ಗೆ ಒಂದೊಂದೇ ಮಾಹಿತಿ ಹೊರಬರುತ್ತಿದೆ. ಇದನ್ನೂ ಓದಿ: ರಾಜ್ಯವನ್ನೇ ಹುಡುಕಿದರೂ ಸಿಗದ ಕ್ವೀನ್ಪಿನ್ ದಿವ್ಯಾ ಹಾಗರಗಿ ಅರೆಸ್ಟ್ ಆದ ಕಥೆಯೇ ರೋಚಕ
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ನ ಭದ್ರಕೋಟೆ ಮಂಡ್ಯ ಮೇಲೆ ಕಣ್ಣಿರಿಟ್ಟಿರುವ ಬಿಜೆಪಿ ನಾಯಕರು ಜೆಡಿಎಸ್ನಲ್ಲಿದ್ದ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ಬಿಜೆಪಿಗೆ ಸೆಳೆಯಲು ತಂತ್ರ ಆರಂಭಿಸಿದ್ದು, ಅಶ್ವಿನ್ ಗೌಡ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ. ಕಳೆದ ಎಂಪಿ ಚುನಾವಣೆಯಲ್ಲಿ ಲಕ್ಷ್ಮೀ ಅಶ್ವಿನ್ಗೌಡಗೆ ಟಿಕೆಟ್ ಕೊಡುವುದಾಗಿ ಜೆಡಿಎಸ್ ನಾಯಕರು ಹೇಳಿದ್ದರು. ಹಾಗಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಬಳಿಕ ಲಕ್ಷ್ಮೀ ಅಶ್ವಿನ್ಗೌಡ ಬದಲು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಅವಕಾಶ ಕಳೆದುಕೊಂಡ ಲಕ್ಷ್ಮೀ ಅಶ್ವಿನ್ ಗೌಡರನ್ನು ಈ ಬಾರಿ ಬಿಜೆಪಿ ಸೆಳೆಯಲು ಪ್ರಯತ್ನ ಆರಂಭಿಸಿದೆ. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು
ಈಗಾಗಲೇ ಲಕ್ಷ್ಮೀ ಅಶ್ವಿನ್ ಗೌಡ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇವರೊಂದಿಗೆ ಮಾಜಿ ಸಚಿವ ಎಸ್.ಟಿ.ಜಯರಾಂ ಪುತ್ರ ಅಶೋಕ್ ಜಯರಾಂಗೂ ಬಿಜೆಪಿ ಗಾಳ ಹಾಕಿದ್ದು, ಬಿಜೆಪಿ ನಾಯಕರೊಂದಿಗೆ ಅಶೋಕ್ ಜಯರಾಂ ಗುರುತಿಸಿಕೊಳ್ಳುತ್ತಿದ್ದಾರೆ.
ಕೆಲದಿನಗಳ ಹಿಂದೆ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಅವರ ಹುಟ್ಟುಹಬ್ಬಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ ಶುಭ ಕೋರಿದ್ದರು. ಈ ಮೂಲಕ ಸಚ್ಚಿದಾನಂದ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬುದಾಗಿ ವರದಿಯಾಗಿತ್ತು. ಈಗಾಗಲೇ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚ್ಚಿದಾನಂದ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಸುಮಲತಾ ಕೂಡ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹರಿದಾಡುತ್ತಿದೆ.