ಮಡಿಕೇರಿ: ಕೇರಳಕ್ಕೆ ತೆರಳುತ್ತಿದ್ದ ಐರಾವತ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಘಟನೆ ವಿರಾಜಪೇಟೆ ತಾಲೂಕಿನ ಮಾಪಿಳ್ಳೆತೋಡಿನಲ್ಲಿ ನಡೆದಿದೆ.
ಇಂದು ನಸುಕಿನ ಜಾವ ಸುಮಾರು 2 ಗಂಟೆಗೆ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಪ್ರಯಾಣ ಮಾಡುತ್ತಿದ್ದ ಬೆಂಗಳೂರು ಕೇಂದ್ರಿಯ ವಿಭಾಗದ 4ನೇ ಘಟಕದ ಮಲ್ಟಿ ಆಕ್ಸೆಲ್ ವೋಲ್ಟೋ ಐರಾವತ ಬಸ್ಸು ಸೇತುವೆಯಿಂದ ಉರುಳಿದೆ.
ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೊನ್ನೆಯಷ್ಟೇ ಇದೇ ಸೇತುವೆ ಬಳಿ ಕೇರಳದ ರಾಜ್ಯ ನೋಂದಣಿಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದಿತ್ತು. ಕಾರಿನೊಳಗಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.
ಈಗ ಮತ್ತೆ ಅದೇ ಸ್ಥಳದಲ್ಲಿ ಐರಾವತ ಬಸ್ಸು ಉರುಳಿಬಿದ್ದಿದೆ. ನದಿಯಲ್ಲಿ ನೀರಿಲ್ಲದ ಕಾರಣದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಈ ಕುರಿತು ಪೊನ್ನಂಪೇಟೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.