ಲಕ್ನೋ: ಮಥುರಾದ ಕೃಷ್ಣ ಜನ್ಮಭೂಮಿ – ಶಾಹಿ ಈದ್ಗಾ ಮಸೀದಿ ವಿವಾದ ಪ್ರಕರಣದ ಬಗ್ಗೆ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿ ನಾಲ್ಕು ತಿಂಗಳಲ್ಲಿ ತೀರ್ಪು ನೀಡುವಂತೆ ಮಥುರಾ ಕೋರ್ಟ್ಗೆ ಸೂಚಿಸಿದೆ.
ಶಾಹಿ ಈದ್ಗಾ ಮಸೀದಿಯಿರುವ ಭೂಮಿ ಕೃಷ್ಣ ಜನ್ಮಭೂಮಿಗೆ ಸೇರಿದ್ದು, ಮಸೀದಿ ತೆರವು ಮಾಡಬೇಕು ಎನ್ನುತ್ತಾ ಹಿಂದೂ ಆರ್ಮಿಯ ಮನೀಶ್ ಯಾದವ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸುನ್ನಿ ವಕ್ಫ್ ಬೋರ್ಡ್ ಸೇರಿ ಇತರೆ ಪಾರ್ಟಿಗಳು ಗೈರಾಗಿದ್ದರು. ಹೀಗಾಗಿ ಇದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನಾಲ್ಕು ತಿಂಗಳಲ್ಲಿ ನಡೆಸಲು ಮಥುರಾ ಕೋರ್ಟ್ಗೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ
ವಕೀಲೆ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತಾಗಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಶ್ರೀ ಕೃಷ್ಣ ಜನ್ಮಭೂಮಿಯ 13.37 ಎಕರೆ ಭೂಮಿಯನ್ನು ಬಿಡುಗಡೆ ಮಾಡುವಂತೆ ಮತ್ತು ಜನ್ಮಭೂಮಿಯ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವಂತೆ ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಇನ್ನು ಮುಂದೆ ಬಲವಂತದ ಮತಾಂತರ ಅಪರಾಧ: ಕಾಯ್ದೆಯಲ್ಲಿ ಏನಿದೆ?
ಟ್ರಸ್ಟ್ನ ಭೂಮಿಯಲ್ಲಿ ನಿರ್ಮಿಸಲಾದ ಈದ್ಗಾವನ್ನು ಅಕ್ರಮ ಎಂದು ಘೋಷಿಸಿ ಅದನ್ನು ಕೆಡವಲು ಮತ್ತು ಸಂಪೂರ್ಣ ಭೂಮಿಯನ್ನು ಡಿ ಫ್ಯಾಕ್ಟೋ ಮಾಲೀಕ ಭಗವಾನ್ ಶ್ರೀ ಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿವಾದಿತ ಸ್ಥಳವನ್ನು ಅಗೆಯುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಹಿಂದೂಗಳ ಪ್ರಕಾರ ಈ ಮಸೀದಿಯನ್ನು ಮೊಘಲ್ ದೊರೆ ಔರಂಗಜೇಬ್ ಆದೇಶದ ಮೇರೆಗೆ 1669 ರಿಂದ 70ರ ಅವಧಿಯಲ್ಲಿ ಖತ್ರಾ ಕೇಶವ್ ದೇವ್ ಮಂದಿರದ ಸಮೀಪದ 13.37 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದು ಕೃಷ್ಣ ಜನ್ಮಸ್ಥಳಕ್ಕೆ ಸನಿಹವಿದೆ. ಹೀಗಾಗಿ ಈ ಮಸೀದಿಯನ್ನು ತೆರವು ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.