ಬೆಂಗಳೂರು: ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುತ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೆಬ್ಬಾಳ ಕ್ಷೇತ್ರದ ಡಾಲರ್ಸ್ ಕಾಲೋನಿಯ ಕುವೆಂಪು ಆಟದ ಮೈದಾನದಲ್ಲಿ ಇಂದು ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಕಾರ್ಯಕ್ರಮಿತ್ತು. ಈ ವೇಳೆ ಮಾತನಾಡಿದ ಡಿಕೆಶಿ, ಬಿಎಸ್ವೈ ಅವರು ಸರಿಯಾಗಿ ಕೆಲಸ ಮಾಡಿಲ್ಲ ಅಂತ ಸಿಎಂ ಸ್ಥಾನದಿಂದ ಇಳಿಸಿದರು. ಒಬ್ಬ ಮಿನಿಸ್ಟರ್ ನಾನು ಪರೀಕ್ಷೆ ಬರೆದಿದ್ದೇನೆ ಫಲಿತಾಂಶ ಬರಬೇಕು ಎನ್ನುತ್ತಿದ್ದ. ಏನಾಯ್ತಪ್ಪ ರಿಸಲ್ಟ್…? ನೀನು ಮಾಜಿ ಆದೆ ಎಂದು ಸಿ.ಪಿ ಯೋಗೇಶ್ವರ್ ಹೆಸರು ಹೇಳದೆ ಡಿಕೆಶಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಹೆಬ್ಬಾಳ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಆಪರೇಷನ್ ಜೆಡಿಎಸ್ ಮಾಡಲಾಗಿದ್ದು, ಎರಡು ಕ್ಷೇತ್ರದ ಜೆಡಿಎಸ್ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆಗೊಂಡರು. 2013 ಮತ್ತು 2018ರ ಜೆಡಿಎಸ್ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳಾಗಿದ್ದ ಹನುಮಂತೇಗೌಡ, ಟಿ. ಜಿ ಚಂದ್ರು, ಮಾಜಿ ಉಪ ಮಾಹಾಪೌರ ಎಂ ಆನಂದ್, ಮಾಜಿ ಜಿಲ್ಲಾಪಾಂಚಾಯತ್ ಸದಸ್ಯ ಹಾಗೂ ಅನೇಕ ಮುಖಂಡರುಗಳು, ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಶಾಸಕರಾದ ಕೃಷ್ಣ ಬೈರೇಗೌಡ ಮತ್ತು ಬೈರತಿ ಸುರೇಶ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಇದನ್ನೂ ಓದಿ: ನಾನು ಕಾಂಗ್ರೆಸ್ಗೆ ಹೋಗ್ತೀನೆಂದು ಹೇಳಿಕೆ ಕೊಡುವವರಿಗೆಲ್ಲಾ ತಲೆ ಕೆಟ್ಟಿದೆ: ಶಿವಲಿಂಗೇಗೌಡ