ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ ಮಾರಮ್ಮ ದೇವಸ್ಥಾನವನ್ನು ಸದ್ಯದಲ್ಲೇ ತೆರೆಯಲಾಗುವುದು ಎಂದು ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸುರೇಶ್ ಕುಮಾರ್ ತಿಳಿಸಿದರು.
ನಗರದ ಬಿಇಓ ಕಚೇರಿ ಆವರಣದಲ್ಲಿರುವ ಕೆ.ಜಿ.ಬಿ.ವಿ. ಹೆಣ್ಣು ಮಕ್ಕಳ ವಸತಿ ನಿಲಯವನ್ನು ಉದ್ಘಾಟಿಸಿ ಮಾತಾಡಿದ ಅವರು, ದೇವಸ್ಥಾನದ ಬಾಗಿಲು ತೆರೆಸುವಂತೆ ಹಲವು ದಿನಗಳಿಂದ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಸದ್ಯದಲ್ಲೇ ಅರ್ಚಕರನ್ನು ಕರೆತಂದು ದೇವರಿಗೆ ಪೂಜೆ ಪ್ರಾರಂಭಿಸಲಾಗುವುದು ಎಂದರು.
ಕಹಿ ಘಟನೆ- ಇಂದಿಗೆ ಒಂದು ವರ್ಷದ ಹಿಂದೆ ನಡೆದ ವಿಷ ಪ್ರಸಾದ ಸೇವಿಸಿ 17 ಜನರು ಸಾವನ್ನಪ್ಪಿದ್ದರು. ಸಂಭ್ರಮದ ವಾರ್ಷಿಕೋತ್ಸವ ಇದಲ್ಲ. ಇದೊಂದು ಕಹಿ ಅನುಭವ ಎಂದು ಸಚಿವ ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದ ಕುಟುಂಬಗಳಿಗೆ ಮತ್ತು ಅಸ್ವಸ್ಥರಾಗಿದ್ದವರಿಗೆ ಪರಿಹಾರ ನೀಡಲಾಗಿದೆ. ಇತ್ತೀಚಿಗೆ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದ ವೇಳೆ ಸುಳ್ವಾಡಿ ಸಂತ್ರಸ್ತರ ಸಭೆ ನಡೆಸಿ ಸಮಸ್ಯೆ ಆಲಿಸಿದರು. ಪರಿಹಾರದ ಪಟ್ಟಿಯಲ್ಲಿ ಕೈಬಿಟ್ಟಿದ್ದ ಹೆಸರುಗಳನ್ನು ಮತ್ತೆ ಸೇರಿಸಲು ತಿಳಿಸಿದ್ದೇನೆ. ಜಮೀನು ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ವಿಷ ಪ್ರಸಾದ ತಿಂದು ಇಂದಿಗೂ ಅನಾರೋಗ್ಯದಿಂದ ಬಳಲುತ್ತಿರುವ ಜನರು ಕೂಲಿ ಮಾಡಲಾಗುತ್ತಿಲ್ಲ. ಕೆಲವರನ್ನು ಕೆಲಸಕ್ಕೆ ಕರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರದಿಂದ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.