ರಾಜ್ಯದಲ್ಲಿ ಮಳೆ ಮತ್ತೆ ಆರಂಭವಾಗಲಿದೆ. ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಅಂಡಮಾನ್ ಸಮುದ್ರದಲ್ಲಿ 5.8 ಕಿಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವದಿಂದಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ಡಿಸೆಂಬರ್ 8 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಯ ಕೆಲವೆಡೆಗಳಲ್ಲಿ ಭಾರೀ ಮಳೆ ಸಾಧ್ಯತೆ ಗೋಚರಿಸಿದ್ದು, ಡಿಸೆಂಬರ್ 8, 9 ಮತ್ತು 10 ರಂದು ಗುಡುಗು ಸಹಿತ ವ್ಯಾಪಕ ಮಳೆ ಬರುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ವಾತಾವರಣ ಸಹಜ ಸ್ಥಿತಿಯಲ್ಲಿದ್ದು, ಡಿಸೆಂಬರ್ 8 ರವರೆಗೆ ಚಳಿ, ಸಾಧಾರಣ ಮಳೆಯಾಗಲಿದೆ. ಬೆಳಗಿನ ಜಾವ ದಟ್ಟ ಮಂಜು ಇರಲಿದೆ. ಡಿಸೆಂಬರ್ 7 ರಿಂದ 10 ರವರೆಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆ ಸುರಿಯುವ ಸಾಧ್ಯತೆ ಕಂಡುಬರಲಿದ್ದು, ಹಿಂಗಾರು ಮಳೆ ಮತ್ತೆ ಚುರುಕು ಪಡೆಯಲಿದೆ. ಡಿಸೆಂಬರ್ 8 ರಿಂದ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆ ಅಬ್ಬರ ಶುರುವಾಗಲಿದೆ.
ಚಿಕ್ಕಬಳ್ಳಾಪುರ, ಕೋಲಾರ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳಲಿದ್ದು, ಗುಡುಗು ಸಹಿತ ಸುಮಾರು 11 ಸೆಂಟಿಮೀಟರ್ ನಷ್ಟು ಮಳೆ ದಾಖಲಾಗಬಹುದು ಎಂದು ಎಚ್ಚರಿಕೆ ನೀಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಜೋರು ಮಳೆ ಆಗಲಿದೆ. ಮಳೆ ನಿಗದಿತ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ ಎಂದು ತಿಳಿಸಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 24-16
ಮಂಗಳೂರು: 32-23
ಶಿವಮೊಗ್ಗ: 31-17
ಬೆಳಗಾವಿ: 30-15
ಮೈಸೂರು: 27-18
ಮಂಡ್ಯ: 28-18
ಮಡಿಕೇರಿ: 26-16
ರಾಮನಗರ: 27-17
ಹಾಸನ: 27-17
ಚಾಮರಾಜನಗರ: 25-18
ಚಿಕ್ಕಬಳ್ಳಾಪುರ: 24-14
ಕೋಲಾರ: 24-16
ತುಮಕೂರು: 27-17
ಉಡುಪಿ: 33-22
ಕಾರವಾರ: 34-23
ಚಿಕ್ಕಮಗಳೂರು: 27-16
ದಾವಣಗೆರೆ: 30-17
ಹುಬ್ಬಳ್ಳಿ: 31-16
ಚಿತ್ರದುರ್ಗ: 29-18
ಹಾವೇರಿ: 31-17
ಬಳ್ಳಾರಿ: 30-17
ಗದಗ: 30-16
ಕೊಪ್ಪಳ: 30-17
ರಾಯಚೂರು: 31-16
ಯಾದಗಿರಿ: 31-16
ವಿಜಯಪುರ: 30-14
ಬೀದರ್: 27-13
ಕಲಬುರಗಿ: 30-14
ಬಾಗಲಕೋಟೆ: 31-15