Bengaluru City
ರಾಜ್ಯದ ಪ್ರವಾಸಿ ತಾಣಗಳಲ್ಲಿ ಜನಸಾಗರ – ಕೊರೊನಾ ಲೆಕ್ಕಿಸದೆ ಜನರ ಮೋಜು ಮಸ್ತಿ

– ಮಡಿಕೇರಿಯ ರಾಜಾಸೀಟ್ನಲ್ಲಿ ಗಿಜಿಗಿಜಿ
ಬೆಂಗಳೂರು/ಮಡಿಕೇರಿ: ಲಾಕ್ಡೌನ್ ಬಳಿಕ ಆಮೆ ನಡಿಗೆಯಲ್ಲಿ ಸಾಗುತ್ತಿದ್ದ ಪ್ರವಾಸೋದ್ಯಮ ವರ್ಷಾಂತ್ಯಕ್ಕೆ ಚೇತರಿಸಿಕೊಳ್ಳುತ್ತಿದೆ. ಕ್ರಿಸ್ಮಸ್ ಸೇರಿದಂತೆ ಸಾಲು ಸಾಲು ರಜೆಗಳಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳೆಲ್ಲ ಭರ್ತಿಯಾಗಿವೆ.
ಬೀಚ್ಗಳು, ನದಿಗಳು, ದೇವಸ್ಥಾನಗಳಲ್ಲಿ ಪ್ರವಾಸಿಗರು ತುಂಬಿ ತುಳುಕಿದ್ದಾರೆ. ಉಡುಪಿಯ ಮಲ್ಪೆ ಬೀಚ್, ಮಂಗಳೂರಿನ ಪಣಂಬೂರು ಬೀಚ್, ಶ್ರೀರಂಗಪಟ್ಟಣದ ಕಾವೇರಿ ತಟ, ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಜನ ಜಂಗುಳಿ ಇತ್ತು. ಯಾರೊಬ್ಬರೂ ಕೊರೋನಾ ರೂಲ್ಸ್ ಫಾಲೋ ಮಾಡಿಲ್ಲ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಕೊರೊನಾ ರೂಪಾಂತರಿ ಅಲೆಯ ಮಧ್ಯೆ ಸಾಮಾಜಿಕ ಅಂತರವನ್ನು ಪ್ರವಾಸಿಗರು ಮರೆತಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕವನ್ನು ಮೂಡಿಸಿದೆ. ಕೈ ತುಂಬಾ ಹಣ, ಒಂದೆರಡು ದಿನಗಳ ಪ್ರವಾಸ ಅಂದುಕೊಂಡು ಆಲೋಚಿಸುವವರಿಗೆ ಮಲೆನಾಡು ಜಿಲ್ಲೆಗಳು ಅದರಲ್ಲೂ ಮಂಜಿನ ನಗರಿ ಕೊಡಗು ನೆನಪಾಗುತ್ತೆ. ಇಲ್ಲಿನ ಪ್ರವಾಸಿ ತಾಣಗಳು ಹಾಗೂ ಪರಿಸರ ಎಲ್ಲರನ್ನೂ ಆಕರ್ಷಿಸುವುದು ಸಹಜ.
ಕೊರೊನಾ ಆತಂಕದಿಂದ ಲಾಕ್ಡೌನ್ ಘೋಷಿಸಿದರಿಂದ ಕಳೆದ 8 ತಿಂಗಳಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕುಂಟುತ್ತಾ ಸಾಗಿತ್ತು. ಪ್ರವಾಸೋದ್ಯಮದ ಉತ್ತೇಜನಕ್ಕೆ ಇಲಾಖೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಅಷ್ಟು ಪರಿಣಾಮಕಾರಿ ಆಗಿರಲಿಲ್ಲ. ಆದರೆ ಹೊಸ ವರ್ಷದ ಆಚರಣೆಗೆ ಕೆಲವೇ ದಿನಗಳಿರುವುದರಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟ್, ಅಬ್ಬಿಫಾಲ್ಸ್, ಕಾವೇರಿ ನಿಸರ್ಗಧಾಮ, ದುಬಾರೆ, ಭಾಗಮಂಡಲ, ತಲಕಾವೇರಿ ಹೀಗೆ ಎಲ್ಲೆಡೆ ಪ್ರವಾಸಿಗರು ದಿಢೀರನೆ ಕಿಕ್ಕಿರಿದು ಸೇರುತ್ತಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಎರಡನೆ ಅಲೆಯಾಗಿ ರೂಪಾಂತರದ ಅರಿವು ಇದ್ದರೂ ಸಾಮಾಜಿಕ ಅಂತರ ಪಾಲಿಸದೆ ಹಾಗೂ ಮಾಸ್ಕ್ ಧರಿಸದೆ ಅಸಡ್ಡೆ ತೋರುತ್ತಿದ್ದಾರೆ.
