ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ನಿಯೋಗದವರು ಪತ್ರಿಕಾ ದಿನಾಚರಣೆ ಮಾಡುವ ಹಿನ್ನೆಲೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ.
ರಾಜ್ಯಪಾಲರಾದ ಥವಾರ್ ಚಂದ್ ಗೆಹ್ಲೊಟ್ ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ನಿಯೋಗ ಗುರುವಾರ ಸೌಹಾರ್ದಯುತ ಭೇಟಿ ಮಾಡಿ ಚರ್ಚೆ ನಡೆಸಿತು. ಜುಲೈ 1 ರಂದು ಆಯೋಜಿಸಲಿರುವ ಕಾರ್ಯಕ್ರಮ ಉದ್ಘಾಟನೆ ಮಾಡಲು ಆಗಮಿಸುವಂತೆ ರಾಜ್ಯಪಾಲರನ್ನು ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ಪತ್ರಕರ್ತರ ಬಗ್ಗೆ ತಮಗೆ ವಿಶೇಷ ಗೌರವವಿದೆ. ಕಾರ್ಯಕ್ರಮಕ್ಕೆ ಬರಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅವರು, ಕನ್ನಡ ಪತ್ರಿಕೋದ್ಯಮ ಬಗ್ಗೆ ಮಾಹಿತಿಯುಳ್ಳ ‘ಕನ್ನಡ ಜರ್ನಲಿಸಮ್ ಮತ್ತು ಟಿಎಸ್ಆರ್ ಪುಸ್ತಕವನ್ನು ರಾಜ್ಯಪಾಲರಿಗೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ತಾವು ಬರೆದ ‘ಕೋವಿಡ್ ಕಥೆಗಳು’ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಇದನ್ನೂ ಓದಿ: ಟ್ರಕ್ ಟರ್ಮಿನಲ್ ನಿರ್ಮಾಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗ್ರಾಮಸ್ಥರು
ರಾಜ್ಯದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಿರುವುದನ್ನು ಈ ಪುಸ್ತಕದಲ್ಲಿ ದಾಖಲು ಮಾಡಿರುವುದಾಗಿ ವಿವರಿಸಿದರು. ನಿಯೋಗದಲ್ಲಿ ಅಕಾಡೆಮಿ ಸದಸ್ಯರಾದ ನಾಗಾರ್ಜುನ ದ್ವಾರಕನಾಥ್, ಬದ್ರುದ್ದೀನ್, ಶಿವರಾಜ್, ಎಸ್.ಲಕ್ಷ್ಮಿನಾರಾಯಣ, ಶಿವಕುಮಾರ್ ಬೆಳ್ಳಿತಟ್ಟೆ ಅವರು ಉಪಸ್ಥಿತರಿದ್ದರು.