ಬೆಂಗಳೂರು: ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತೆ ಅಂತಾ ಭಾವಿಸಬೇಡಿ. ಲಾಕ್ ಡೌನ್ ಎಷ್ಟು ದಿನ ಮುಂದುವರಿಯುತ್ತದೆ ಎನ್ನುವುದು ಜನರ ಜವಾಬ್ದಾರಿ ಮೇಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ತಿಂಗಳೇ ಲಾಕ್ಡೌನ್ ಮುಗಿಯುತ್ತದೆ ಎನ್ನುವಂತಿಲ್ಲ. ದಯಮಾಡಿ ಮನೆಯೊಳಗೆ ಇರಿ. ಹೊರಗಡೆ ಬಂದರೆ ಮತ್ತಷ್ಟು ದಿನ ಲಾಕ್ ಡೌನ್ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಶೇ.75 ರಷ್ಟು ಈಗ ಲಾಕ್ ಡೌನ್ ಆಗಿಲ್ಲ. ಅದಕ್ಕೆ ಜನರೇ ಜವಾಬ್ದಾರಿ. ನಮ್ಮ ರಾಜ್ಯದಲ್ಲಿ ಸೋಂಕು ತಡೆಗಟ್ಟುವ ಕಾರ್ಯದಲ್ಲಿ ಐ ಯಾಮ್ ನಾಟ್ ಹ್ಯಾಪಿ ಎಂದು ಬೇಸರ ವ್ಯಕ್ತಪಡಿಸಿದರು.
ಲಾಠಿ ಇಲ್ಲದೆ ಕೆಲಸ ಆಗುವುದಿಲ್ಲ ಅನ್ನುವಂತಿದೆ. ಅದಕ್ಕಾಗಿ ಪೊಲೀಸರಿಗೆ ಈಗ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಪೊಲೀಸರು ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಮ್ಮ ಅನುಮತಿ ಇದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ ಮೇಲೆ ಲಾಕ್ ಡೌನ್ ಇರುತ್ತದೆ. ಕೊರೋನಾ ಇಲ್ಲದ ಜಿಲ್ಲೆಗಳಲ್ಲಿ ರಿಲ್ಯಾಕ್ಸ್ ಮಾಡಬಹುದು. ಈ ವಿಚಾರದ ಬಗ್ಗೆ ಚರ್ಚೆಯಾಗಿದೆ. ಹಾಟ್ ಸ್ಪಾಟ್ ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯುತ್ತದೆ. ಉಚಿತ ಹಾಲು ವಿತರಣೆ ಏಪ್ರಿಲ್ 14ರ ತನಕ ಮಾತ್ರ ನೀಡುತ್ತೇವೆ. ಆ ನಂತರ ಕೊಡಲು ನಮಗೆ ಶಕ್ತಿ ಇಲ್ಲ ಎಂದು ಹೇಳಿದರು.