ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ʼಸ್ವಾತಂತ್ರ್ಯ ನಡಿಗೆʼ ಕಾರ್ಯಕ್ರಮದಲ್ಲಿ ಎನ್ಎಸ್ಯುಐ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಮೇಲೆ ಕಾರ್ಯದರ್ಶಿ ದೀಪಕ್ ಗೌಡ, ಉಪಾಧ್ಯಕ್ಷ ಜಯಂದರ್ ಹಲ್ಲೆ ಮಾಡಿರುವ ಆರೋಪ ಬಂದಿದೆ. ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕೀರ್ತಿ ಗಣೇಶ್ ದೂರು ನೀಡಿದ್ದಾರೆ.
ಈ ದೂರಿಗೆ ಪ್ರತಿಯಾಗಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೀರ್ತಿ ಗಣೇಶ್ ವಿರುದ್ಧ ದೀಪಕ್ ಹಾಗೂ ಜಯಂದರ್ ದೂರು ನೀಡಿದ್ದಾರೆ.
ಹಿರಿಯ ನಾಯಕರ ಸೂಚನೆಗೆ ಕ್ಯಾರೇ ಎನ್ನದೇ ಯುವ ನಾಯಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಬಗೆಹರಿಯಬೇಕಿದ್ದ ಜಗಳ ಈಗ ಪೊಲೀಸ್ ಠಾಣೆಯ ಅಂಗಳಕ್ಕೆ ಬಂದಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ – ಶೀಘ್ರವೇ ಸರ್ಕಾರದ ಆದೇಶ ಸಾಧ್ಯತೆ
ಜಗಳ ನಡೆದಿದ್ದು ಯಾಕೆ?
ಎನ್ಎಸ್ಯುಐ ಸಂಘಟನೆಯಲ್ಲಿ ಮೊದಲಿಂದಲೂ ಈ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ಇದೆ. ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಕೀರ್ತಿ ಗಣೇಶ್ ಡ್ಯಾನ್ಸ್ ಟೀಮ್ ಒಂದನ್ನು ಸಿದ್ದ ಮಾಡಿರುತ್ತಾರೆ. ಡ್ಯಾನ್ಸ್ ಟೀಮ್ ಪಾದಯಾತ್ರೆಯಲ್ಲಿ ಭಾಗಿಯಾಗಿರುತ್ತದೆ.
ಈ ನಡಿಗೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ದೀಪಕ್ ಗೌಡ ಹಾಗೂ ಜಯಂದರ್ ಕರೆ ತಂದಿದ್ದಾರೆ. ಕೀರ್ತಿ ಗಣೇಶ್ ಗಮನಕ್ಕೆ ತರದೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕರೆತಂದಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯಕ್ಕೆ ಉಭಯ ಬಣಗಳ ನಡುವೆ ಜಗಳ ನಡೆದಿದೆ.
ಎಫ್ಐಆರ್ ದಾಖಲು:
ಕಿರ್ತೀ ಗಣೇಶ್ ಕೊಟ್ಟಿರುವ ದೂರಿನ ಆಧಾರ ಮೇಲೆ ವಿವಿಪುರಂ ಪೊಲೀಸ್ ಠಾಣೆಯಲ್ಲಿ ದೀಪಕ್ ಗೌಡ , ಚೇತನ್, ದಿಲೀಪ್ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಕೀರ್ತಿ ಗಣೇಶ್ ವಿರುದ್ಧ ಬಸವನಗುಡಿಯಲ್ಲಿ ನೀಡಲಾದ ದೂರನ್ನು ಎನ್ಸಿಆರ್(ಗಂಭೀರವಲ್ಲದ ಪ್ರಕರಣ) ಮಾಡಲಾಗಿದೆ. ದೂರು ಕೊಡಲು ಮುಂದಾದಾಗ ಬಸವನಗುಡಿ ಠಾಣೆ ಮುಂದೆ ಗಲಾಟೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎನ್ಸಿಆರ್ ದಾಖಲಾಗಿದೆ.
ಎಫ್ಐಆರ್ ಆದ ಬಳಿಕ ಡ್ಯಾನ್ಸ್ ಟೀಂ ಮುಂದಾಳತ್ವ ವಹಿಸಿದ್ದ ಪ್ರವೀಣ್ ಹುಡುಗರು ದೀಪಕ್ ಗೌಡ ಟೀಂನ ಹುಡುಗನಿಗೆ ವಿವಿಪುರಂ ಠಾಣಾ ವ್ಯಾಪ್ತಿಯ ಪೇಟ್ರೊಲ್ ಬಂಕ್ ಬಳಿ ಹಲ್ಲೆ ಮಾಡಿದ್ದಾರೆಂದು ಇಂದು ಪ್ರವೀಣ್ ಟೀಂ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.