ಬೆಳಗಾವಿ: ಕನ್ನಡ (Kannada) ವಿಷಯದಲ್ಲಿ ಬೆಳಗಾವಿಯ (Belagavi) ರಾಜಕಾರಣಿಗಳು ರಣ ಹೇಡಿಗಳು. ಕನ್ನಡದ ಉಳಿವಿಗಾಗಿ ಕೇವಲ ಕನ್ನಡ ಸಂಘಟನೆಗಳು ಮಾತ್ರ ಹೋರಾಟ ಮಾಡುತ್ತಿವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ (Narayana Gowda) ಹರಿಹಾಯ್ದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಸ್ಗಳ ಮೇಲೆ ಮರಾಠಿ ಅಕ್ಷರಗಳಿವೆ. ಆದರೆ ಮಹಾರಾಷ್ಟ್ರದ ಬಸ್ಗಳ ಮೇಲೆ ಕನ್ನಡದ ಅಕ್ಷರಗಳಿಲ್ಲ. ಈ ಸಂಬಂಧ ನಿಮ್ಮ ಸಂಘಟನೆ ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಬಹುದಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು. ಕನ್ನಡದ ವಿಷಯ, ಕನ್ನಡಿಗರ ಪರವಾಗಿ ಇವರು ಎಂದೂ ಧ್ವನಿ ಎತ್ತಿಲ್ಲ. ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡಿದಾಗ ಇಲ್ಲಿನ ರಾಜಕಾರಣಿಗಳ ಮನೆಗೆ ಹೋಗಿ ಬನ್ನಿ ಎಂದರೆ ಒಬ್ಬರೂ ಬರಲಿಲ್ಲ. ಅಂತಹ ರಣಹೇಡಿಗಳಿದ್ದಾರೆ. ಅವರ ವಿರುದ್ಧ ನಾವು ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಯುವತಿಯ ರಂಪಾಟ – ತಣ್ಣೀರು ಎರಚಿ ನಶೆ ಇಳಿಸಿದ ಸ್ಥಳೀಯರು
ಕಲ್ಯಾಣ ಕರ್ನಾಟಕದ ಮತ್ತೊಂದು ಭಾಗದಲ್ಲಿ ಬೆಳ್ಳಿ ಹಬ್ಬ ಆಚರಣೆ ಮಾಡಬೇಕೆಂದು ನಮ್ಮ ಕೇಂದ್ರ ಸಮಿತಿ ನಿರ್ಧಾರ ಮಾಡಿದೆ. ಉತ್ತರ ಕರ್ನಾಟಕ ಎಂದಾಗ ಬೆಳಗಾವಿಯಲ್ಲಿ ಆಯೋಜನೆ ಮಾಡಬೇಕು. ಕಲ್ಯಾಣ ಕರ್ನಾಟಕ ಎಂದಾಗ ಕಲಬುರಗಿಯಲ್ಲಿ ಕಾರ್ಯಕ್ರಮ ಮಾಡಬೇಕೆಂಬ ತೀರ್ಮಾನ ಮಾಡಿದ್ದೇವೆ. ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಒಮ್ಮತದಿಂದ, ಒಗ್ಗಟ್ಟಿನಿಂದ ಆಚರಣೆ ಮಾಡಿದ್ದೇವೆ. ಅದಕ್ಕಾಗಿ ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರು ಸಭೆ ಮಾಡಿದ್ದಾರೆ. ಇಲ್ಲಿ ಹಾಗೂ ಅಲ್ಲಿ ಇರುವ ಪುಣ್ಯ ಕ್ಷೇತ್ರದಲ್ಲಿ ಅವರು ಅಲ್ಲಿ ಕನ್ನಡ ಹಾಗೂ ಇಲ್ಲಿ ಮರಾಠಿ ಬಳಸಬೇಕು ಎಂದು ಸಭೆಯಲ್ಲಿ ತಿರ್ಮಾನ ಮಾಡಿದ್ದಾರೆ. ಸರ್ಕಾರ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ. ನಾವು ಮರಾಠಿ ಬಳಸಿದರೆ ಸಾಲದು ಅವರು ಅಲ್ಲಿ ಕನ್ನಡ ಬಳಕೆ ಮಾಡಬೇಕು. ಕನ್ನಡ ಪರ ಸಂಘಟನೆಗಳು ಬೆಂಗಳೂರಿಗೆ ಸೀಮಿತ ಆಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಒಂದು ಭಾಷೆಯ ಜನರ ಕಾಟವಾದರೆ ಬೆಂಗಳೂರಿನಲ್ಲಿ ನೂರಾರು ಭಾಷೆಯ ಜನರ ಕಾಟವಿದೆ. ಹಾಗಾಗಿ ನಾವು ಅಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಕನ್ನಡ ಪರ ಸಂಘಟನೆಗಳಿಗೆ ಬೆಳಗಾವಿಯಲ್ಲಿ ಸರ್ಕಾರ ಅನುದಾನ ನೀಡದ ವಿಚಾರಕ್ಕೆ ಮಹಾರಾಷ್ಟ್ರ ಸರ್ಕಾರ ಎಂಇಎಸ್ಗೆ (MES) ಕೋಟ್ಯಂತರ ರೂಪಾಯಿ ಅನುದಾನ ನೀಡುವಾಗ ಇಲ್ಲಿ ನಮ್ಮವರಿಗೆ ಅನುದಾನ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಾವಿಗೂ ಮುನ್ನ ಕ್ಲಾಸ್ಮೇಟ್ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!
ಬೆಳಗಾವಿಯಲ್ಲಿ ರಾಜ್ಯೋತ್ಸವ ಸಮಯದಲ್ಲಿ ನಿರ್ಬಂಧ ಹೇರಿರುವ ವಿಚಾರಕ್ಕೆ, ಅದಕ್ಕೆ ಸ್ಥಳೀಯ ನಾಯಕರು ಉತ್ತರ ನೀಡಬೇಕು. ಕನ್ನಡಿಗರ ಸಂಭ್ರಮಕ್ಕೆ ಯಾರು ಅಡ್ಡಿ ಆಗಬಾರದು. ಕನ್ನಡಿಗರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಈ ವಿಚಾರವಾಗಿ ಗೃಹ ಸಚಿವರ ಬಳಿ ಚರ್ಚೆ ಮಾಡುತ್ತೇವೆ. ನಮ್ಮ ರಾಜಕಾರಣಿಗಳು ರಣಹೇಡಿಗಳು, ಎಲ್ಲವನ್ನು ನಾವೇ ಒತ್ತಾಯ ಮಾಡಬೇಕು. ಕಾರ್ಯಕ್ರಮಕ್ಕೆ ಬರಲು ಮನೆಗೆ ಹೋಗಿ ಆಹ್ವಾನ ನೀಡಿದರು ಅವರು ಬರುವುದಿಲ್ಲ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.