ಚಿಕ್ಕೋಡಿ: ಕರ್ನಾಟಕದಲ್ಲಿ (Karnataka) ಕನ್ನಡದ ಹಬ್ಬ, ಕನ್ನಡ ನಾಡು ನುಡಿಯ, ಕನ್ನಡ ರಾಜ್ಯೋತ್ಸವ (Kannada Rajyotsava) ಸಂಭ್ರಮದ ತಯಾರಿ ನಡೆಯುತ್ತಿದ್ದರೆ, ಅತ್ತ ಗಡಿ ಪ್ರದೇಶದಲ್ಲಿ ಶಿವಸೇನೆ (Shiv Sena) ಮತ್ತು ಎಂಇಎಸ್ (MES) ಕಾರ್ಯಕರ್ತರು ನಾಡವಿರೋಧಿ ಚಟುವಟಿಕೆ ಶುರು ಮಾಡಿದ್ದಾರೆ. ರಾಜ್ಯೋತ್ಸವಕ್ಕೆ ಬೆಳಗಾವಿ (Belagavi) ಸಜ್ಜಾಗುತ್ತಿದ್ದರೆ, ನಾಡ ದ್ರೋಹಿ ಶಿವಸೇನೆ ತನ್ನ ಪುಂಡಾಟಿಕೆ ಮುಂದುವರಿಸಿ ರಸ್ತೆಯಲ್ಲಿ ಕುಳಿತು ಹೈಡ್ರಾಮಾ ನಡೆಸಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಇರುವ ಕುಗನೊಳ್ಳಿ ಚೆಕ್ಪೋಸ್ಟ್ನಲ್ಲಿ ನಾಳೆ ನಾಡಹಬ್ಬವನ್ನು ಜೋರಾಗಿ ಆಚರಣೆ ಮಾಡಬೇಕು ಎಂದು ಕನ್ನಡಿಗರು ತಯಾರಿ ನಡೆಸುತ್ತಿದ್ದಾರೆ. ಇತ್ತ ಶಿವಸೇನೆ ಮತ್ತು ನಾಡದ್ರೋಹಿ ಎಂಇಎಸ್ ಎಂದಿನಂತೆ ತನ್ನ ಖಯಾಲಿ ಮುಂದುವರಿಸಿದೆ.
ಪ್ರತಿ ವರ್ಷದ ಪದ್ಧತಿಯಂತೆ ಈ ಬಾರಿಯೂ ನಮಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಪ್ರವೇಶಕ್ಕೆ ಶಿವಸೇನೆ ಮುಂದಾಗಿತ್ತು. ಕೊಲ್ಹಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ರಾಜ್ಯ ಪ್ರವೇಶಕ್ಕೆ ಮುಂದಾದ ಶಿವಸೇನೆಯ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಕುಗನೊಳ್ಳಿ ಚೆಕ್ಪೋಸ್ಟ್ ಬಳಿ ತಡೆದಿದ್ದಾರೆ. ಪೊಲೀಸರು ತಡೆದಿದ್ದರಿಂದ ಅವರ ವಿರುದ್ಧವೇ ನಡು ರಸ್ತೆಯಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಕ್ಕದ ನದಿಗೆ ಇಳಿದು ಗಡಿ ಪ್ರವೇಶದ ನಾಟಕ ನಡೆಸಿ, ರಸ್ತೆ ಮಧ್ಯೆಯೇ ಕುಳಿತು ತಮ್ಮ ದಾಂಧಲೆಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಬಂಧಿತ ಮೂವರು ಆರೋಪಿಗಳು ಮತ್ತೆ ಪೊಲೀಸರ ವಶಕ್ಕೆ
ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆ ಶುರು ಮಾಡಿದ ಶಿವಸೇನೆ ಪುಂಡರು ಬಿಸಿಲಿಗೆ ಬಳಲಿ, ಬೆಂಡಾಗಿ ಕೊನೆಗೆ ಪೊಲೀಸರ ಬಳಿ ಒಂದು ನಿವೇದನೆಯನ್ನು ಇಟ್ಟಿದ್ದಾರೆ. ನಾವು ರಾಜ್ಯ ಪ್ರವೇಶ ಮಾಡುವುದಿಲ್ಲ. ನಾವು ತಂದ ವಿಜಯ ಜ್ಯೋತಿಯನ್ನಾದರೂ ಬೆಳಗಾವಿಗೆ ತಲುಪಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಇದಕ್ಕೂ ಸಹ ಜಪ್ಪಯ್ಯ ಎನ್ನದ ಕರ್ನಾಟಕ ಪೊಲೀಸರು ಯಾವುದೇ ಕಾರಣಕ್ಕೂ ಯಾವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲ ಎಂದು ತಮ್ಮಷ್ಟಕ್ಕೆ ತಾವೇ ಶಿವಸೇನೆಯ ಪುಂಡರು ಮತ್ತೆ ಮಹಾರಾಷ್ಟ್ರದ ಹಾದಿ ತುಳಿದಿದ್ದಾರೆ. ಇದನ್ನೂ ಓದಿ: ಪೊಲೀಸ್ ಹುದ್ದೆಗೆ 70-80 ಲಕ್ಷ ಹಣ – ಹೇಳಿಕೆ ನನ್ನದಲ್ಲವೆಂದು ಉಲ್ಟಾ ಹೊಡೆದ MTB