ಬಾಲಿವುಡ್ ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಇತ್ತೀಚಿನ ದಿನಗಳಲ್ಲಿ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ (Brahmastra) ಸಿನಿಮಾದ ಹಿಂದೆ ಬಿದ್ದಿದ್ದರು. ಈ ಸಿನಿಮಾದ ಕಲೆಕ್ಷನ್, ಗೆಲುವಿನ ವಿಚಾರವಾಗಿ ದಿನಕ್ಕೊಂದು ಕ್ಯಾತೆ ತಗೆಯುತ್ತಿದ್ದರು. ಇದೀಗ ವಿವಾದಿತ ಬ್ರಹ್ಮಾಸ್ತ್ರವನ್ನು ಕೆಳಗಿಟ್ಟು ದೇವರ ದರ್ಶನಕ್ಕೆ ಹೋಗಿದ್ದಾರೆ. ಇಡೀ ಕುಟುಂಬ ಸಮೇತ ಮಥುರಾ (Mathura) ವೃಂದಾವನ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ (Banke Bihari Temple) ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಬಂಕೆ ಬಿಹಾರಿ ದೇವಸ್ಥಾನಕ್ಕೆ ಕಂಗನಾ (Kangana Ranaut)ಭೇಟಿ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಹಲವಾರು ಬಾರಿ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ. ಈ ಬಾರಿ ಕುಟುಂಬ ಸಮೇತ ಬಂದಿರುವುದು ವಿಶೇಷ. ಕಂಗನಾ ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ, ಅವರು ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲೂ ಪಾಲ್ಗೊಂಡು ಭಜನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್
ದೇವಸ್ಥಾನಕ್ಕೆ ಕಂಗನಾ ಬರುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಅನೇಕರು ಅಲ್ಲಿಗೆ ಆಗಮಿಸಿದ್ದರು. ನೆಚ್ಚಿನ ನಟಿಯ ಜೊತೆ ಸೆಲ್ಫಿ ತಗೆಸಿಕೊಂಡರು. ಕಂಗನಾ ಯಾರಿಗೂ ನಿರಾಸೆ ಮಾಡದೇ ಎಲ್ಲರೊಂದಿಗೆ ಫೋಟೋ ಕ್ಲಿಸಿಕೊಂಡಿದ್ದು ವಿಶೇಷ. ಅಭಿಮಾನಿಗಳಿಂದ ಕಂಗನಾ ಅವರನ್ನು ಬಿಡಿಸಿಕೊಳ್ಳಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಆ ಪ್ರಮಾಣದಲ್ಲಿ ಅಭಿಮಾನಿಗಳು ನೆರೆದಿದ್ದರು.
ಪೂಜೆ ಮುಗಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ, ‘ರಾಧೆ (Radhe), ಕೃಷ್ಣ ಅವರ ದರ್ಶನ ಸಿಕ್ಕಿದ್ದು ನನ್ನ ಪುಣ್ಯ. ಹಾಗಾಗ್ಗೆ ಈ ದೇವಸ್ಥಾನಕ್ಕೆ ಬರುತ್ತಲೇ ಇರುತ್ತೇನೆ. ಏನೋ ಒಂದು ರೀತಿಯಲ್ಲಿ ನೆಮ್ಮದಿ ನನಗೆ. ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ’ ಎಂದು ಹೇಳಿದರು. ಯಾವುದೇ ರಾಜಕೀಯ ಪ್ರೇರಿತ ಪ್ರಶ್ನೆಗಳಿಗೆ ಅವರು ಉತ್ತರ ಕೊಡದೇ ಅಲ್ಲಿಂದ ನಡೆದಿದ್ದಾರೆ.