Districts
ಧಮ್ ಇದ್ರೆ ಮೋದಿ ಮುಂದೆ ಕೂತು ಪರಿಹಾರ ತೆಗೆದುಕೊಂಡು ಬರಲಿ: ಅಶ್ವಥ್ ನಾರಾಯಣ್ಗೆ ಸಿದ್ದು ಸವಾಲ್

ಕಲಬುರಗಿ: ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಸಿದ್ದರಾಮಯ್ಯಗಿಂತ ಹೆಚ್ಚು ಧಮ್ ಇದೆ ಅಂತಾರೆ. ಧಮ್ ಇದ್ದರೆ ಪ್ರಧಾನಿ ಮೋದಿ ಮುಂದೆ ಕೂತು ಪರಿಹಾರ ತೆಗೆದುಕೊಂಡು ಬರಲಿ ಎಂದು ಅಶ್ವಥ್ ನಾರಾಯಣ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಜನರು ಅಭಿಮಾನದಿಂದ ಸಿಎಂ ಆಗಲಿ ಅಂತ ಹೇಳ್ತಾರೆ ಎಂದರು.
ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪದೇ ಪದೇ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರಂತೆ ಸವದಿ ಹೇಳ್ತಿದ್ದಾರೆ. ಆದರೆ ರಾಜಕೀಯವಾಗಿ ಅವರು ಸುಮ್ಮನೆ ಹೇಳ್ತಾರೆ. ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದಾರೆ. ಅದನ್ನು ಬಿಟ್ಟು ಶಾಸಕರು ಬರ್ತಾರಂತೆ ಹೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ವೈಮಾನಿಕ ಸಮೀಕ್ಷೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಅದರಿಂದ ಯಾವುದೇ ಪ್ರಯೋಜನ ಇಲ್ಲ. ಜನರ ಜೊತೆ ಮಾತನಾಡಿಲ್ಲ, ನೆರೆ ಪೀಡಿತ ಪ್ರದೇಶಗಳಿಗೆ ಹೋಗಿಲ್ಲ. ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದರೂ ಪ್ರಯೋಜನವಿಲ್ಲ. ಅಶ್ವಥ್ ನಾರಾಯಣ್ಗೆ ಹತ್ತು ಪಟ್ಟು ಧಮ್ ಇರಲಿ. ಆದರೆ ಪ್ರಧಾನಿ ಮೋದಿ ಬಳಿ ಹೋಗಿ ರಾಜ್ಯಕ್ಕೆ ಬರಬೇಕಾದ ಪರಿಹಾರ ತೆಗೆದುಕೊಂಡು ಬರಲಿ ಎಂದು ಕಿಡಿಕಾರಿದರು.
ನೆರೆ ಸಂತ್ರಸ್ತರಿಗೆ ಇನ್ನೂ ನಯಾ ಪೈಸೆ ಹಣ ನೀಡಿಲ್ಲ. ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು. ಇದೀಗ ಅವರ ಮಗ ಆರ್ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ತಿಳಿಸಿದರು.
