ಮೈಸೂರು: ಇಲ್ಲಿನ ಕೆ.ಆರ್ ನಗರದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರ ಪುತ್ರ ದರ್ಪ ಮೆರೆದಿರೋ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾಲ್ಕೈದು ಮಂದಿ ಜೊತೆಗೂಡಿ ಯುವಕನೊಬ್ಬನ ಕೈ ಕಟ್ಟಿಸಿ ಮನಬಂದಂತೆ ಥಳಿಸುತ್ತಿದ್ದಾರೆ. ಅದರಲ್ಲೂ ಶಾಸಕ ಸಾ.ರಾ. ಮಹೇಶ್ ಅವರ ಮಗ ಜಯಂತ್ ಕಟ್ಟಿಗೆಯ ಕೋಲು ಹಿಡಿದುಕೊಂಡು ಯುವಕನಿಗೆ ಮನಬಂದಂತೆ ಥಳಿಸಿದ್ದಾನೆ.
ದಮ್ಮಯ್ಯ ಬಿಟ್ಟುಬಿಡಿ ಅಂದ್ರು ಬಿಡದೇ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ತಾನು ಯುವಕನಿಗೆ ಥಳಿಸುತ್ತಿರುವ ವೀಡಿಯೋವನ್ನು ರೆಕಾರ್ಡ್ ಮಾಡುತ್ತಿರುವುದು ಶಾಸಕನ ಮಗನಿಗೆ ಗೊತ್ತಿದೆ. ತನ್ನ ದರ್ಪವನ್ನು ಪ್ರದರ್ಶನಕ್ಕಿಡಲು ಬೇಕಂತಲೇ ವಿಡಿಯೋ ಮಾಡಿದ್ದಾರೆ ಎನ್ನಲಾಗ್ತಿದೆ.
ಅಂದಹಾಗೆ ಈ ಘಟನೆ ನಡೆದು ಒಂದೂವರೆ ವರ್ಷವಾಗಿದೆ. ಈಗ ರಾಜಕೀಯ ದುರುದ್ದೇಶದಿಂದ ವೀಡಿಯೋ ಬಿಡುಗಡೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಘಟನೆ ನಡೆದು ಎಷ್ಟು ದಿನವಾದರೂ ಆಗಲಿ. ಹೀಗೇ ಒಬ್ಬ ವ್ಯಕ್ತಿಯ ಮೇಲೆ ದೌರ್ಜನ್ಯ ಮಾಡೋದು ಎಷ್ಟು ಸರಿ. ಶಾಸಕರೇ ಇದೇನಾ ನಿಮ್ಮ ಪುತ್ರನಿಗೆ ನೀವು ಕಲಿಸಿರೋ ಸಂಸ್ಕೃತಿ ಅಂತ ಜನಸಾಮಾನ್ಯರು ಪ್ರಶ್ನಿಸಿದ್ದಾರೆ.