ಉಡುಪಿ: ಲೋಕದಲ್ಲಿ ಅಧರ್ಮ, ಅನ್ಯಾಯ ತಾಂಡವಾಡುತ್ತಿದ್ದರೂ ತುಳುನಾಡಿನಲ್ಲಿ ದೈವಗಳು ತನ್ನ ಶಕ್ತಿ ಸಾಮರ್ಥ್ಯ ಮೆರೆಯುತ್ತಿರುತ್ತದೆ ಎಂಬ ನಂಬಿಕೆ ಇದೆ. ಇದು ಕೇವಲ ನಂಬಿಕೆ ಮಾತ್ರ ಅಲ್ಲ ಸತ್ಯ. ದೈವಗಳು ತಮ್ಮ ಕಾರಣಿಕವನ್ನು ಅನಾದಿ ಕಾಲದಿಂದಲೂ ನಿರಂತರವಾಗಿ ತೋರಿಸುತ್ತಲೇ ಬಂದಿದೆ. ದೈವ ಮುನಿದರೆ ಉಳಿಗಾಲವಿಲ್ಲ ಎಂಬ ಮಾತಿದೆ. ಈ ನಂಬಿಕೆಗೆ ಪುಷ್ಟಿ ನೀಡುವಂತೆ ಉಡುಪಿ ಕಾಪುವಿನಲ್ಲಿ ಘಟನೆಯೊಂದು ನಡೆದಿದೆ.
ಹತ್ತು ದಿನಗಳ ಹಿಂದೆ ಪಡುಬಿದ್ರೆ ಮದುವೆ ಹಾಲ್ನಲ್ಲಿ ಕಳ್ಳತನವಾದ ಚಿನ್ನದ ಸರ, ಅಚ್ಚರಿಯ ರೀತಿಯಲ್ಲಿ ಪತ್ತೆಯಾಗಿದೆ. ಮದುವೆ ದಿನ ಮಗುವಿನ ಚಿನ್ನದ ಸರ ಕಳ್ಳತನವಾದಾಗ ಯಾರು ಕೂಡ ಪೊಲೀಸರಿಗೆ ದೂರು ನೀಡಿಲ್ಲ. ಬದಲಾಗಿ ತನ್ನ ಕುಟುಂಬದ ದೈವದ ಮುಂದೆ ದೂರನ್ನು ಹೇಳಿಕೊಂಡಿದ್ದಾರೆ. ಕಷ್ಟಪಟ್ಟು ಸಂಪಾದನೆ ಮಾಡಿದ ಹಣದಲ್ಲಿ ಚಿನ್ನದ ಸರವನ್ನು ಖರೀದಿ ಮಾಡಿದ್ದೆವು. ನಮಗೆ ಆದ ನಷ್ಟವನ್ನು ನೀನೇ ತುಂಬಿಕೊಡಬೇಕು ಎಂದು ಜಾರಂದಾಯ ದೈವದಲ್ಲಿ ಇಡೀ ಕುಟುಂಬ ಕೈಮುಗಿದು ಪ್ರಾರ್ಥನೆ ಮಾಡಿಕೊಂಡಿತ್ತು. ತಮ್ಮ ಮನದ ಇಂಗಿತವನ್ನು ಕುಟುಂಬ ದೈವದ ಮುಂದೆ ಹೇಳಿಕೊಂಡಿದ್ದರು. ಇದನ್ನೂ ಓದಿ: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಎರಡು ಹಸುಗಳು ಸಜೀವ ದಹನ
ಪ್ರಾರ್ಥನೆ ಮಾಡಿ ಮೂರೇ ದಿನಕ್ಕೆ ಚಿನ್ನದ ಸರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದ ನಾಂಜಾರು ಧರ್ಮ ಜಾರಂದಾಯ ದೈವದ ದೀಪದ ಕೆಳಗೆ ಕಾಣಿಸಿಕೊಂಡಿದೆ. ಕುಟುಂಬಕ್ಕೆ ಅಚ್ಚರಿ ಖುಷಿ ಮತ್ತು ಪವಾಡವೊಂದು ನಡೆದ ಅನುಭವವಾಗಿದೆ. ಇಡೀ ದಿನ ಕುಟುಂಬಸ್ಥರು, ಗೆಳೆಯರು ದೇವಸ್ಥಾನದ ಸುತ್ತಮುತ್ತ ಮಾತುಕತೆ ಚರ್ಚೆಯಲ್ಲಿ ತೊಡಗಿದ್ದರು. ಆದರೆ ಚಿನ್ನದ ಸರ ಅಲ್ಲಿಗೆ ಹೇಗೆ ಬಂತು ಎಂಬ ಬಗ್ಗೆ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಕಳ್ಳತನ ಮಾಡಿದವ ಜಾರಂದಾಯ ದೈವದ ವಕ್ರದೃಷ್ಟಿ ಬಿದ್ದರೆ ನನಗೆ ಉಳಿಗಾಲ ಇಲ್ಲ ಎಂದು ಭಾವಿಸಿ ದೈವದ ಕಾಲಬುಡದಲ್ಲಿ ಸರ ಇಟ್ಟು ಹೋಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ರಾಕಿಭಾಯ್ ಕೆಜಿಎಫ್ ಸ್ಟೈಲಲ್ಲಿ SDPI ವಾರ್ನಿಂಗ್- ವೈಲೆನ್ಸ್ ಡೈಲಾಗ್ ಹೇಳಿದ ರಿಯಾಜ್
ನಾನ್ಯಾರು ಶ್ರೀ ಧರ್ಮ ಜಾರಂದಾಯ ಹಿಂದಿನಿಂದಲೂ ಕೂಡ ಪವಾಡದ ದೈವ ಎಂದೇ ಪ್ರಸಿದ್ಧಿ. ಹಲವು ಬಾರಿ ಇಂತಹ ಪವಾಡಗಳು, ಕಾರಣಿಕದ ಕೆಲಸಗಳು ಜಾರಂದಾಯ ದೈವದಿಂದ ಆಗಿದೆ. ಈ ಬಾರಿ ಕೂಡ ಇಂಥದ್ದೇ ಒಂದು ಅಚ್ಚರಿ ನಡೆದಿದೆ. ದೈವ ಗುಡಿಯ ಮೆಟ್ಟಿಲಿನಲ್ಲಿ ಬೆಳಗುವ ದೀಪದ ಕೆಳಗೆ ಚಿನ್ನದ ಸರ ಕಾಣಿಸಿಕೊಂಡು ಇಡೀ ಕುಟುಂಬ ಸಂತಸಗೊಂಡಿದೆ. ಇದರಿಂದ ದೈವದ ಮೇಲಿನ ಭಯ-ಭಕ್ತಿ ಹೆಚ್ಚಾಗಿದೆ ಎಂದು ಕುಟುಂಬದ ಸದಸ್ಯ ಕುಂಜೂರು ರಾಕೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.