ಮಲಯಾಳಂನ ಖ್ಯಾತ ನಟಿ ಪ್ರಿಯಾ ಆನಂದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಮೆರಿಕಾದಲ್ಲಿ ಬೆಳೆದ ಈ ಚೆಲುವೆ ಬಹುಭಾಷಾ ನಟಿ ಎಂದೇ ಖ್ಯಾತಿಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೊಂದಿಗೆ ಜೇಮ್ಸ್ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ಆನಂದ್ ತಮ್ಮ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾತುಗಳನ್ನು ಆಡಿದ್ದಾರೆ.
ತಮ್ಮ ಮದುವೆ ಕುರಿತಂತೆ ಮಾತನಾಡಿರುವ ಪ್ರಿಯಾ, ದೇಶಬಿಟ್ಟು, ತಮ್ಮದೇ ದೇಶವೊಂದನ್ನು ನಿರ್ಮಿಸಿರುವ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದಾರೆ. ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಸತ್ತಿದ್ದಾರೆ ಎಂಬ ವದಂತಿಯಿರುವ ಸಮಯದಲ್ಲಿ ಈ ಹೇಳಿಕೆ ನೀಡಿರುವುದು ಆಸಕ್ತಿದಾಯಕವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿತ್ಯಾನಂದ ಸ್ವಾಮಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವರನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದಿದ್ದಾರೆ.
ನಿತ್ಯಾನಂದ ಮೇಲೆ ಈಗಾಗಲೇ ಭಾರತದಲ್ಲಿ ಹಲವು ಕೇಸುಗಳಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ದೇಶ ತೊರೆದು ಈಕ್ವೆಡಾರ್ ಬಳಿಯ ಒಂದು ದ್ವೀಪದಲ್ಲಿ ತಮ್ಮದೇ ದೇಶ ಕಟ್ಟಿಕೊಂಡಿದ್ದಾರೆ. ತಮ್ಮದೆ ಆದ ವಿಶೇಷ ಕರೆನ್ಸಿಯನ್ನು ಸಹ ಮುದ್ರಿಸಿದ್ದಾರೆ. ತಮ್ಮ ದೇಶಕ್ಕೆ ಬರುವ ಭಕ್ತರು ನೇರವಾಗಿ ಶಿವನ ದರ್ಶನ ಮಾಡಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
ಆದರೆ, ಸದ್ಯ ನಿತ್ಯನಂದನ ಬಗ್ಗೆ ಸುದ್ದಿಯೇ ಇಲ್ಲ. ಕೆಲವು ತಿಂಗಳ ಹಿಂದೆ, ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಬಂದಿದ್ದವು. ಇದರ ನಡುವೆ ಖ್ಯಾತ ನಟಿ ಪ್ರಿಯಾ ಅವರ ಈ ಹೇಳಿಕೆಗಳು ಅಭಿಮಾನಗಳಲ್ಲಿ ಅಚ್ಚರಿ ಮೂಡಿಸಿದೆ. ನಿತ್ಯಾನಂದ ಅವರಿಗೆ ಈ ವಿಷಯವನ್ನು ತಲುಪಿಸುವುದು ಹೇಗೆ ಎಂಬ ಚರ್ಚೆ ಕೂಡ ನಡೆದಿದೆ. ಇದೊಂದು ತಮಾಷೆಯ ಮಾತಾಗಿದ್ದರೂ, ಪ್ರಿಯಾ ಆನಂದ್ ಗೆ ನಿತ್ಯಾನಂದನ ಮೇಲೆ ಅದು ಹೇಗೆ ಪ್ರೀತಿ ಮೂಡಿತು ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ.