– ಶಿಕ್ಷಣ ಸಚಿವರ ಸ್ಥಾನವನ್ನು ಹೊರಟ್ಟಿಗೆ ಸರ್ಕಾರ ನೀಡಲಿ
ಬೆಳಗಾವಿ: ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ಕೈ ತಪ್ಪಿದ್ದು ಉತ್ತರ ಕರ್ನಾಟಕಕ್ಕೆ ಶಾಕಿಂಗ್ ಸುದ್ದಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಚಳಿಗಾಲ ಅಧಿವೇಶನದ ಬಳಿಕ ಕನ್ನಡದ ಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಸವರಾಜ್ ಹೊರಟ್ಟಿ ಅವರು ಅತಿ ಹೆಚ್ಚು ಬಾರಿ ವಿಧಾನ ಪರಿಷತ್ಗೆ ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಬಸವರಾಜ್ ಹೊರಟ್ಟಿ ಅವರಿಗೆ ಹೆಚ್ಚು ಅನುಭವವಿದೆ. ಹೀಗಾಗಿ ಅವರನ್ನು ಸಚಿವರನ್ನಾಗಿ ಮಾಡಿ ಶಿಕ್ಷಣ ಖಾತೆ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.
ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಕಾಂಗ್ರೆಸ್ ನಾಯಕರು ಈ ರೀತಿಯ ತಾರತಮ್ಯಕ್ಕೆ ಉತ್ತೇಜಿಸುತ್ತಿದ್ದಾರೆ. ಇದು ಕಾಂಗ್ರೆಸ್ ಸ್ವಭಾವ ಮತ್ತು ಮೈತ್ರಿ ಪಾಲನೆಯ ವಿರುದ್ಧದ ನಡೆ ಎಂದು ಆರೋಪಿಸಿದರು.
ಬಸವರಾಜ್ ಹೊರಟ್ಟಿ ಇಲ್ಲವೇ ಕಾಂಗ್ರೆಸ್ನ ಎಸ್.ಆರ್.ಪಾಟೀಲ್ ಅವರಿಗೆ ಸಭಾಪತಿ ಸ್ಥಾನ ನೀಡುತ್ತೇವೆ ಅಂತ ಹೇಳುತ್ತಾ ಬಂದಿದ್ದರು. ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡಿದರೆ ಸಂತೋಷವಾಗುತಿತ್ತು. ಆದರೆ ದಿಢೀರ್ ನಿರ್ಧಾರ ಬದಲಿಸಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಈ ನಿರ್ಧಾರ ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರಕ್ಕೆ ಪೆಟ್ಟು ನೀಡಲಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv