ಲಕ್ನೋ: ಇದು ಕೇವಲ ಟ್ರೇಲರ್ ಅಷ್ಟೇ ನಿಜವಾದ ಫಿಲ್ಮ್ ಇನ್ನೂ ಬಾಕಿ ಇದೆ ಎಂದು ಹೇಳುವ ಮೂಲಕ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಡಿ ಹೊಗಳಿದ್ದಾರೆ.
ಬಿಜ್ನೋರ್ ಜಿಲ್ಲೆಯ ಚಾಂದ್ಪುರದಲ್ಲಿ ಬಿಜೆಪಿಯ ಜನ ವಿಶ್ವಾಸ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಉತ್ತರ ಪ್ರದೇಶದಲ್ಲಿರುವ ಮಾಫಿಯಾವನ್ನು ಮಾತ್ರ ತೊಡೆದುಹಾಕುತ್ತಿಲ್ಲ. ಜೊತೆಗೆ ಬಡತನ, ಹಸಿವು ಮತ್ತು ನಿರುದ್ಯೋಗವನ್ನು ಸಹ ಕೊನೆಗೊಳಿಸಲಿದ್ದೇವೆ. ನೀವು ನೋಡಿದ್ದು ಕೇವಲ ಐದು ವರ್ಷಗಳ ಟ್ರೇಲರ್ ಅಷ್ಟೇ. ನಿಜವಾದ ಫಿಲ್ಮ್ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನ ಸೇವೆಯೇ ನಿಜವಾದ ರಾಮ ರಾಜ್ಯ: ಯೋಗಿ ಆದಿತ್ಯನಾಥ್
ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಮತ್ತೊಮ್ಮೆ ಅಧಿಕಾರ ನಡೆಸಲು ಅವಕಾಶ ನೀಡಿ ಶಾಂತಿಯಿಂದ ಕುಳಿತು ಹೇಗೆ ಪವಾಡಗಳು ನಡೆಯುತ್ತವೆ ಎಂಬುವುದನ್ನು ಕಾದು ನೋಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದಾಗಲಿಂದಲೇ ದೇಶದಲ್ಲಿ ರಾಮರಾಜ್ಯ ಪ್ರಾರಂಭವಾಗಿದೆ. ದೇಶ ಬದಲಾಗುತ್ತಿದೆ ಮತ್ತು ಉತ್ತರ ಪ್ರದೇಶ ಕೂಡ ಬದಲಾಗುತ್ತಿದೆ. 2014 ಕ್ಕಿಂತ ಮೊದಲು ಉತ್ತರ ಪ್ರದೇಶ ಹೇಗಿತ್ತು ಮತ್ತು ಈಗ ಹೇಗಿದೆ ಎಂದು ಹೋಲಿಸಿ ನೋಡಿ ಎಂದು ಜನರಿಗೆ ಹೇಳಿದ್ದಾರೆ.
ಕಳೆದ 50 ವರ್ಷಗಳಲ್ಲಿ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಹೆಚ್ಚು ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಬಿಜೆಪಿ ಆಡಳಿತದಲ್ಲಿ ರಸ್ತೆಗಳು ದುರಸ್ತಿಗೊಂಡಿವೆ. ರಾಷ್ಟ್ರೀಯ ಹೆದ್ದಾರಿಗಳು ಒಂದು ರಾಜ್ಯಕ್ಕೆ ಮತ್ತೊಂದು ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತಿವೆ. ಮೊದಲು ಮೂರು ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣ ಇದೀಗ ಒಂದು ಗಂಟೆ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.