ನವದೆಹಲಿ: ಭಾರತ 75ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದರೂ ಅದರ ನಡುವೆಯೇ ದಾಳಿಯ ಆತಂಕವನ್ನು ಎದುರಿಸುತ್ತಿದೆ. ಇಂಟೆಲಿಜೆನ್ಸ್ ಬ್ಯೂರೋ(ಐಬಿ) ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವಾರು ನಗರಗಳಲ್ಲಿ ದಾಳಿ ನಡೆಯಬಹುದಾಗಿ ಎಚ್ಚರಿಕೆಯನ್ನೂ ನೀಡಿದೆ. ಐಬಿ ನೀಡಿರುವ ಕೆಲವು ಪ್ರಮುಖ ಎಚ್ಚರಿಕೆಗಳು ಇಂತಿವೆ.
ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣ ಸಮಾರಂಭದಲ್ಲಿ ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಬಹುದೆಂದು ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದಲ್ಲದೇ ಪಾಕಿಸ್ತಾನದಿಂದ ಪಂಜಾಬ್ನ ಗಡಿ ಮೂಲಕ ದೆಹಲಿಗೆ ಡ್ರೋನ್ಗಳು ಪ್ರವೇಶಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ಬಂಧನಕ್ಕೊಳಗಾದ ಉಗ್ರರ ವಿಚಾರಣೆ ವೇಳೆ ಈ ವಿಷಯ ತಿಳಿದುಬಂದಿರುವುದಾಗಿ ಮಾಹಿತಿ ಲಭಿಸಿದೆ.
ಪಾಕಿಸ್ತಾನಿ ಉಗ್ರ ಸಂಘಟನೆಗಳು ಡ್ರೋನ್ಗಳ ಮೂಲಕ ಸಾಕಷ್ಟು ಶಸ್ತ್ರಾಸ್ತ್ಗಳು ಹಾಗೂ ಸ್ಫೋಟಕಗಳನ್ನು ಭಾರತದಲ್ಲಿ ನೆಲೆಸಿರುವ ಉಗ್ರರಿಗೆ ವಿತರಿಸಲು ಪ್ರಯತ್ನಿಸಿವೆ. ಇತ್ತೀಚೆಗೆ ಪಂಜಾಬ್ನಲ್ಲಿ ಬಿಎಸ್ಎಫ್ ಅಧಿಕಾರಿಗಳು ಅಂತಹ ಸರಬರಾಜನ್ನು ತಡೆದಿದ್ದಾರೆ. ಇದನ್ನೂ ಓದಿ: ಧ್ವಜಾರೋಹಣಕ್ಕೆ ಈದ್ಗಾ ಮೈದಾನದಲ್ಲಿ ಸಿದ್ಧತೆ- ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ
ರಾಷ್ಟ್ರ ರಾಜಧಾನಿಯಲ್ಲಿ ಒಬ್ಬ ವ್ಯಕ್ತಿಯಿಂದಲೇ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಕಳವಳ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿ ದೊಡ್ಡ ವಾಹನ, ಹರಿತವಾದ ಆಯುಧ ಅಥವಾ ಶಸ್ತ್ರಾಸ್ತ್ರಳನ್ನು ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ. ಇಂತಹ ದಾಳಿಯನ್ನು ತಪ್ಪಿಸಲು ಎಚ್ಚರಿಕೆ ವಹಿಸಲು ಪೊಲೀಸರಿಗೆ ತಿಳಿಸಲಾಗಿದೆ.
ಭಯೋತ್ಪಾದಕರು ಹಲವು ತಂತ್ರಜ್ಞಾನಗಳನ್ನು ಬಳಸಿ ಗಾಳಿಪಟ ಅಥವಾ ಹಾರಾಡುವ ವಸ್ತುಗಳ ರೂಪದಲ್ಲಿ ಕೆಂಪು ಕೋಟೆಯ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಕೆಂಪು ಕೋಟೆಯ ಬಳಿ ಹಾರಾಡುವ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸೂಚಿಸಲಾಗಿದೆ.
ಉತ್ತರ ಭಾರತದ ಬೈಸಾಖಿ ಹಬ್ಬದ ಮೇಲೆ ನಿಗಾ ಇಡಲು ನಿರ್ದೇಶನ ನೀಡಲಾಗಿದೆ. ಹಬ್ಬಕ್ಕೆ ಬಳಸಲಾಗುವ ವಸ್ತುಗಳನ್ನು ಬಳಸಿ ಉಗ್ರರು ದಾಳಿ ನಡೆಸಬಹುದು ಎಂದು ಭದ್ರತಾ ಸಂಸ್ಥೆಗಳು ಹೇಳಿವೆ. ಸಿಖ್ಸ್ ಫಾರ್ ಜಸ್ಟಿಸ್, ಜೈಶ್-ಎ-ಮೊಹಮ್ಮದ್, ಐಎಸ್ ಖೊರಾಸನ್ ಘಟಕಗಳು ದಾಳಿ ನಡೆಸಬಹುದು ಎನ್ನಲಾಗಿದೆ. ಇದನ್ನೂ ಓದಿ: ಪಂಜಾಬ್ನಲ್ಲಿ ಇನ್ಮುಂದೆ ಒಬ್ಬ ಶಾಸಕನಿಗೆ ಒಂದೇ ಬಾರಿ ಪಿಂಚಣಿ – 100 ಕೋಟಿ ಉಳಿತಾಯಕ್ಕೆ ಸಿಎಂ ಪ್ಲ್ಯಾನ್