ಬೀಜಿಂಗ್ / ನವದೆಹಲಿ: ಟ್ವಿಟ್ಟರ್ ಖರೀದಿಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪೆನಿಯು ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಕೈಬಿಡುವ ಯೋಚನೆ ಮಾಡಿದೆ.
ಭಾರತ ಸರ್ಕಾರದಿಂದ ಕಾರುಗಳ ಮೇಲಿನ ಆಮದು ಸುಂಕ ಕಡಿತಗೊಳಿಸಲು ನಡೆಸಿದ ಯತ್ನ ವಿಫಲವಾಗಿರುವ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ಇದೀಗ ಕಾರುಗಳ ಉತ್ಪಾದನೆಗೆ ಇಂಡೋನೇಷ್ಯಾದತ್ತ ಚಿತ್ತ ಹರಿಸಿದ್ದಾರೆ. ಇದನ್ನೂ ಓದಿ: ಬೋಳು ತಲೆ ಅಂತ ಕರೆಯುವುದೂ ಲೈಂಗಿಕ ಕಿರುಕುಳ- ಉದ್ಯೋಗ ನ್ಯಾಯಮಂಡಳಿ ತೀರ್ಪು
ಈಗಾಗಲೇ ಮಸ್ಕ್ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ಅವರನ್ನು ಭೇಟಿಯಾಗಿದ್ದಾರೆ. ಇದು ಉತ್ಪಾದನಾ ಘಟಕಗಳಿಗೆ ಜಾಗದ ಹುಡುಕಾಟ ಎಂದುಕೊಳ್ಳಲಾಗಿದೆ. ಇಂಡೋನೇಷ್ಯಾ ಬ್ಯಾಟರಿಗಳಿಗೆ ಪ್ರಮುಖ ಲೋಹವಾದ ನಿಕಲ್ನ ಪ್ರಮುಖ ಉತ್ಪಾದಕ ದೇಶವೂ ಆಗಿದೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ನಡೆದರೆ ಟೆಸ್ಲಾ ಇಂಡೋನೇಷ್ಯಾದಲ್ಲಿ ಬೇರೂರಲಿದೆ.
ಜಾಗತಿಕ ಮಾರುಕಟ್ಟೆಗೆ ಟೆಸ್ಲಾ ಕಾರುಗಳನ್ನು ಉತ್ಪಾದಿಸಲು ಜಾಗ ಹುಡುಕುತ್ತಿರುವ ಮಸ್ಕ್, ಅಲ್ಲಿಯೇ ಹೊಸ ಉತ್ಪಾದನಾ ಘಟಕ ಸ್ಥಾಪಿಸಿ ಅದನ್ನು ಏಷ್ಯಾದ ಹಬ್ ಆಗಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್
ಸಿಲಿಕಾನ್ ಸಿಟಿಗೆ ಕೈತಪ್ಪಿದ ಅವಕಾಶ:
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಟೆಸ್ಲಾ ಬೆಂಗಳೂರಿನಲ್ಲಿ ಕಂಪನಿಯನ್ನು ನೊಂದಾಯಿಸಿ, ಮಳಿಗೆ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿತ್ತು. ಒಂದಿಷ್ಟು ಅಧಿಕಾರಿಗಳನ್ನೂ ನೇಮಿಸಿದ್ದ ಕಂಪನಿ, ಆಮದು ಸುಂಕ ಕಡಿತಕ್ಕಾಗಿ ಸರ್ಕಾರದ ಮೇಲೆ ಪದೇ-ಪದೇ ಒತ್ತಡ ಹೇರುತ್ತಲೇ ಇತ್ತು. ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋರೂಮ್ ಮತ್ತು ಸೇವಾ ಕೇಂದ್ರಗಳನ್ನು ತೆರೆಯಲು ರಿಯಲ್ ಎಸ್ಟೇಟ್ ಆಯ್ಕೆಗಳಿಗಾಗಿ ಟೆಸ್ಲಾ ಹಲವು ತಿಂಗಳ ಕಾಲ ಹುಡುಕಾಟ ನಡೆಸಿತ್ತು.
ಅಮೆರಿಕ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಂಡ ಎಲೆಕ್ಟ್ರಿಕ್ ವಾಹನಗಳನ್ನು (ಇವಿಗಳು) ಕಡಿಮೆ ಸುಂಕದಲ್ಲಿ ದೇಶದಲ್ಲಿ ಮಾರಾಟ ಮಾಡುವ ಮೂಲಕ ಬೇಡಿಕೆಯ ವ್ಯಾಪ್ತಿ-ವಿಸ್ತಾರವನ್ನು ಪರೀಕ್ಷಿಸಲು ಯತ್ನಿಸಿತ್ತು. ಇದಕ್ಕಾಗಿ ಆಮದು ಸುಂಕ ಕಡಿತ ಮಾಡುವಂತೆ ಸರ್ಕಾರದ ಜೊತೆ ಸತತ 1 ವರ್ಷಗಳ ಕಾಲ ಮಾತುಕತೆಯನ್ನೂ ನಡೆಸಿತ್ತು. ಆದರೆ, ಮೇಕ್ ಇನ್ ಇಂಡಿಯಾ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಭಾರತ ಸರ್ಕಾರ ಶೇ.100 ರಷ್ಟು ಸುಂಕ ಕಡಿಮೆ ಮಾಡುವ ಬದಲು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವಂತೆ ಕಂಪೆನಿ ಮೇಲೆ ಒತ್ತಡ ಹೇರಿತ್ತು. ಈ ಕಾರಣಗಳಿಂದಾಗಿ ಟೆಸ್ಲಾ ಭಾರತದಿಂದಲೇ ದೂರ ಉಳಿಯಲು ನಿರ್ಧರಿಸಿದೆ.
ಇದೀಗ ಮಳಿಗೆಗೆ ಸ್ಥಳ ಹುಟುಕಾಟವನ್ನು ನಿಲ್ಲಿಸಿದ್ದು, ಭಾರತದಲ್ಲಿದ್ದ ಆ ತಂಡದ ಒಂದಿಷ್ಟು ಅಧಿಕಾರಿಗಳೂ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.