ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ 40 ಎಕರೆ ಭಾಗದಲ್ಲಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದು, ಗ್ರಾಮಸ್ಥರೇ ಲಾರಿಯನ್ನು ತಡೆದು ಕಳೆದ ರಾತ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ 2 ತಿಂಗಳಿನಿಂದ 40 ಎಕರೆ ಪ್ರದೇಶದಿಂದ ಕೆ.ಆರ್.ನಗರ ಮತ್ತಿತರೆಡೆಗೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ. ಸಿಸಿ ಕ್ಯಾಮರಾ ಅಳವಡಿಸಿದ್ದರೂ ನಿರಂತರವಾಗಿ ಮರಳು ದಂಧೆ ನಡೆಯುತ್ತಿದೆ. ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರೇ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಬೇಕಾಯಿತು.
ರಾತ್ರಿ ವೇಳೆ ಮರಳು ಸಾಗಾಟವಾಗುತ್ತಿದ್ದು, ಲಾರಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹಿಟಾಚಿ ಯಂತ್ರ ಮತ್ತು ಅಕ್ರಮವಾಗಿ ತೆಗೆದಿರುವ ಮರಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಮಧ್ಯ ರಾತ್ರಿಯಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದ್ದು, ನೆಲ್ಯಹುದಿಕೇರಿಯ ವಿವಿಧ ಪ್ರದೇಶಗಳಲ್ಲಿ ಇದು ನಿರಂತರವಾಗಿದೆ. ನಿಯಮ ಬಾಹಿರ ಮರಳುಗಾರಿಕೆಯ ಹಿಂದೆ ಮರಳು ಮಾಫಿಯಾ ಕೆಲಸ ಮಾಡುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಂದ ರಾಜಭವನ ಚಲೋ- ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್
ಅನಾಹುತ ಸಂಭವಿಸುವ ಮೊದಲು ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಮರಳುಗಾರಿಕೆಗೆ ಬಳಸಿದ ಹಿಟಾಚಿ ವಾಹನ ಸೇರಿದಂತೆ ಎಲ್ಲಾ ಯಂತ್ರಗಳನ್ನು ಮತ್ತು ಅಕ್ರಮವಾಗಿ ತೆಗೆದಿರುವ ಮರಳನ್ನು ವಶಕ್ಕೆ ಪಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಮತ್ತೆ ಏರಿಕೆ; ಸರ್ಕಾರದಿಂದ ಪರಿಷ್ಕೃತ Guidelines ಪ್ರಕಟ – ಮಾರ್ಗಸೂಚಿಯಲ್ಲೇನಿದೆ?