ನವದೆಹಲಿ: ಜಹಾಂಗೀರ್ಪುರಿ ಹಿಂಸಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪ್ರಮುಖ ಆರೋಪಿ ಅನ್ಸಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಅನ್ಸಾರ್ಗೆ ಬೇರೆ ಬೇರೆ ಮೂಲಗಳಿಂದ ಹಣಕಾಸಿನ ನೆರವು ಸಿಕ್ಕಿರುವಂತೆ ಭಾಸವಾಗುತ್ತಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಾಕೇಶ್ ಅಸ್ತಾನಾ ಮನವಿ ಮಾಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ರವನ್ನು ಪರಿಶೀಲಿಸುತ್ತಿದ್ದು ಶೀಘ್ರ ಕ್ರಮ ಕೈಗೊಳ್ಳುವ ಸಾಧ್ಯತೆಗಳಿದೆ.
ಈ ನಡುವೆ ದೇಶದ ಹಲವು ಭಾಗಗಳಲ್ಲಿ ಕೋಮು ಘರ್ಷಣೆ ನಡೆಯುತ್ತಿದ್ದು ಅದರ ಭಾಗವಾಗಿ ಜಹಾಂಗೀರ್ಪುರಿಯಲ್ಲೂ ಕಲ್ಲು ತೂರಾಟ ನಡೆದಿತ್ತು. ರಾಕೇಶ್ ಅಸ್ತಾನಾ ಬರೆದಿರುವ ಪತ್ರ ಈಗ ಮಹತ್ವ ಪಡೆದುಕೊಂಡಿದ್ದು ಘಟನೆಯ ಹಿಂದೆ ದೊಡ್ಡ ಹಣಕಾಸಿನ ನೆರವು ಇರಬಹುದು ಎನ್ನಲಾಗುತ್ತಿದ್ದು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ.
ಕಳೆದ ಶನಿವಾರ ಹನುಮಾನ್ ಜಯಂತಿ ದಿನ ಶೋಭಾಯಾತ್ರೆ ನಡೆಸಲಾಗುತ್ತಿತ್ತು. ಮಸೀದಿಯ ಬಳಿ ತೆರಳುವ ವೇಳೆ ಬೆಂಬಲಿಗರೊಂದಿಗೆ ಬಂದಿದ್ದು ಅನ್ಸಾರ್ ರಂಜಾನ್ ಇಫ್ತಾರ್ ಸಮಯ ನಡೆಯುತ್ತಿದ್ದು ಮುಂದೆ ಸಾಗುವಂತೆ ಕೇಳಿಕೊಂಡಿದ್ದರು. ಇದು ಪರಿಸ್ಪರ ವಾಗ್ವಾದಕ್ಕೆ ಕಾರಣವಾಗಿ ಕಲ್ಲು ತೂರಾಟ ನಡೆದು ಸ್ಥಳದಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ ಎಂಟು ಮಂದಿ ಪೋಲೀಸರು ಗಾಯಗೊಂಡಿದ್ದರು.
ಪ್ರಕರಣ ಸಂಬಂಧ 26 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಈ ಪೈಕಿ ಅನ್ಸಾರ್ ಪ್ರಮುಖ ಆರೋಪಿಯಾಗಿದ್ದಾನೆ. ಅನ್ಸಾರ್ ಹಿಂದೆ ಎರಡು ಹಲ್ಲೆ ಪ್ರಕರಣ, ಜೂಜು ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪದಲ್ಲಿ ಬಂಧಿಯಾಗಿದ್ದ. ಹಿಂಸಾಚಾರ ಘಟನೆಯೂ ಪೂರ್ವ ನಿಯೋಜಿತ ಎಂದು ದೆಹಲಿ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.