ಬೆಂಗಳೂರು: ರಾಜ್ಯದಲ್ಲಿ ಮಟ್ಕಾ ದಂಧೆ, ಅಕ್ರಮ ಪಬ್ (Pub) ಗಳು ನಡೆಯುತ್ತಿವೆ. ಇದಕ್ಕೆ ಪೊಲೀಸ್ ಇಲಾಖೆಯೂ (Police Department) ಸಹಕಾರ ನೀಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಇಲ್ಲಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ `ಪಂಚರತ್ನ ರಥಯಾತ್ರೆ’ಗೆ (Pancharatna Rathayatra) ಚಾಲನೆ ನೀಡಿದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಿನ್ನೆ ಹೃದಯಾಘಾತದಿಂದ (Heart Attack) ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದರಿಂದ ಆ ರೀತಿ ಹೃದಯಾಘಾತವಾಗಿದೆ. ಈ ಬಗ್ಗೆ ಮೃತ ಅಧಿಕಾರಿ ನಂದೀಶ್ ಅವರ ಪತ್ನಿ ಮಾತಾಡಿರೋದು ನೋಡಿದ್ದೇನೆ. ಕೆ.ಆರ್.ಪುರಂನಲ್ಲಿ ಅಧಿಕಾರಿ ನಂದೀಶ್ ವ್ಯಾಪ್ತಿಯಲ್ಲಿ ರಾತ್ರಿ ಆದರೂ ಪಬ್ ನಡೆಯುತ್ತಿತ್ತು. ಇದಕ್ಕಾಗಿ ನಂದೀಶ್ ರನ್ನ ಅಮಾನತು ಮಾಡಲಾಗಿದೆ ಇದರಿಂದ ಮಾನಸಿಕವಾಗಿ ಕುಗ್ಗಿ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸರ್ಕಾರ ರಾತ್ರಿ 1 ಗಂಟೆವರೆಗೆ ಹೊಟೇಲ್ ತೆರೆಯೋಕೆ ಅವಕಾಶ ಕೊಟ್ಟಿದೆ. ಅದೊಂದು ಪಬ್ ಮಾತ್ರ ರಾತ್ರಿ ನಡೆಯುತ್ತಿತ್ತಾ? ಅ ಪಬ್ ನಲ್ಲಿ ರಾಜಕಾರಣಿಗಳ ಬೆಂಬಲಿಗರು ಎಷ್ಟು ಜನ ಇದ್ದರು? ಪೊಲೀಸರು ಸಹ ಪಬ್ನಲ್ಲಿ ಡಾನ್ಸ್ (Dance) ಮಾಡ್ತಿದ್ರು ಅಂತಾ ಹೇಳಿದ್ದಾರೆ. ಇದೆಲ್ಲಾ ನೋಡಿದಾಗ ರಾಜ್ಯದಲ್ಲಿ ಮಟ್ಕಾ ದಂಧೆ, ಅಕ್ರಮ ಪಬ್ ಗಳು ನಡೆಯಲು ಪೊಲೀಸ್ ಇಲಾಖೆಯೂ ಸಹಕಾರ ಕೊಟ್ಟಿದೆ ಎಂಬುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.