ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ, ಪಾಕಿಸ್ತಾನ ಶ್ರೀಲಂಕಾವಾಗಿ ಬದಲಾಗುತ್ತದೆ. ಇದಕ್ಕೆ ಹೊಸ ಸರ್ಕಾರವೇ ಹೊಣೆಯಾಗಲಿದೆ ಎಂದು ಪಾಕ್ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಶೀದ್, ಪ್ರಸ್ತುತ ಪಾಕಿಸ್ತಾನದ ಸಮ್ಮಿಶ್ರ ಸರ್ಕಾರ ದಿಕ್ಕಿಲ್ಲದ ಸ್ಥಿತಿಯಲ್ಲಿದೆ. ಅವರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮೇ 18ಕ್ಕೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ರೆಡ್ ಅಲರ್ಟ್ ಘೋಷಣೆ
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ, ಅದರ ಪರಿಸ್ಥಿತಿಯನ್ನು ಎದುರಿಸಲು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್(ಪಿಟಿಐ) ಈಗಾಗಲೇ ಕಾರ್ಯತಂತ್ರವನ್ನು ರೂಪಿಸಿದೆ. ಒಂದು ವೇಳೆ ಅವರನ್ನು ಬಂಧಿಸಿದ್ದೇ ಆದಲ್ಲಿ, ಪಾಕಿಸ್ತಾನ ಶ್ರೀಲಂಕಾ ಎದುರಿಸುತ್ತಿರುವ ಪರಿಸ್ಥಿತಿಯನ್ನೇ ಎದುರಿಸಲಿದೆ. ಇದಕ್ಕೆ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರವೇ ಹೊಣೆಯಾಗಲಿದೆ ಎಂದು ರಶೀದ್ ಹೇಳಿಕೆ ನೀಡಿದ್ದಾರೆ.
ಶ್ರೀಲಂಕಾ 1948ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕದ ಇತಿಹಾಸದಲ್ಲಿ ಎಂದೂ ಕಂಡಿರದ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದೀಗ ಪಾಕಿಸ್ತಾನ ಶ್ರೀಲಂಕಾವಾಗಿ ಬದಲಾಗುವುದನ್ನು ನಾನು ಬಯಸುವುದಿಲ್ಲ ಎಂದು ರಶೀದ್ ತಿಳಿಸಿದ್ದಾರೆ. ಇದನ್ನೂ ಓದಿ: ಎರಡಂಕಿಗೆ ಇಳಿಕೆ ಕಂಡ ಕೊರೊನಾ – ನಿನ್ನೆಗಿಂತ ಇಂದು 28 ಕೇಸ್ ಇಳಿಮುಖ
ಇತ್ತೀಚೆಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಕಳೆದ ತಿಂಗಳ ಅಂತ್ಯದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸೌದಿ ಅರೇಬಿಯಾದ ಮದೀನಾಗೆ ಭೇಟಿ ನೀಡಿದ್ದಾಗ, ಅವರ ವಿರುದ್ಧ ಯಾತ್ರಾರ್ಥಿಗಳು ಘೋಷಣೆ ಕೂಗಿದ್ದರು. ಇದರ ಹಿಂದೆ ಇಮ್ರಾನ್ ಖಾನ್ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.