ಮೈಸೂರು: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಬಗ್ಗೆ ಧ್ವನಿ ಎತ್ತಿರುವ ಶಾಸಕ ಪ್ರಿಯಾಂಕ್ ಖರ್ಗೆ ಈಗ ಅಕ್ರಮದ ಹಿಂದೆ ಗೃಹ ಸಚಿವರೇ ಇದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಖರ್ಗೆ, ಈ ಪ್ರಕರಣದಲ್ಲಿ ಈಗ ಬಂಧನವಾಗಿರುವವರು ಕಿಂಗ್ಪಿನ್ಗಳಲ್ಲ ಕೇವಲ ಮಧ್ಯವರ್ತಿಗಳು. ಇವರಿಗೆ ಕೆಲಸ ವಹಿಸಿದ್ದು ಯಾರು? ದುಡ್ಡು ಯಾರಿಗೆ ಸಂದಾಯವಾಗಿದೆ? ಅನ್ನೋದು ಮುಖ್ಯ ನನಗೆ ಗೃಹ ಸಚಿವರ ಮೇಲೆಯೆ ಅನುಮಾನವಿದೆ. ಅಕ್ರಮ ನಡೆಯುತ್ತಿದೆ ಎಂದು ಗೊತ್ತಿದ್ದರೂ ಸುಮ್ಮನೆ ಕೂತಿದ್ದರು, ಅದರ ಅರ್ಥವೇನು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?
ಪ್ರಕರಣ ಸರಿಯಾಗಿ ತನಿಖೆಯಾದರೆ ಅದು ಸರ್ಕಾರಕ್ಕೆ ಸುತ್ತಿಕೊಳ್ಳುತ್ತದೆ. ಅಕ್ರಮದ ಬಗ್ಗೆ ಮಾತಾಡಿದ್ದಕ್ಕೆ ನನಗೆ ನೋಟಿಸ್ ಕೊಟ್ಟಿದ್ದಾರೆ. ನಾನು ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದೇನೆ. ಹಾಗಾಗಿ ಖುದ್ದಾಗಿ ವಿಚಾರಣೆಗೆ ಹೋಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಹಿಟ್ ಅಂಡ್ ರನ್ ವ್ಯಕ್ತಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ನಾನು ಹಿಟ್ ಅಂಡ್ ರನ್ ಆಗಿದ್ದರೆ ನಾನು ಧ್ವನಿ ಎತ್ತಿದ ಕೇಸ್ಗಳನ್ನೇಲ್ಲ ಏಕೆ ತನಿಖೆ ಮಾಡಿಸುತ್ತಿದ್ದೀರಿ? ನಾನು ಮುಖ್ಯ ಅಲ್ಲ ಅನ್ನೋದಾದರೆ ನನ್ನ ಮಾತಿಗೆ ಏಕೆ ಪ್ರಾಮುಖ್ಯತೆ ಕೊಡುತ್ತೀರಿ? ಬಿಟ್ಟುಬಿಡಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ
ಸರ್ಕಾರ ತನಿಖೆ ನಡೆಸದೇ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಈವರೆಗೆ ಒಂದೇ ಒಂದು ಪರೀಕ್ಷಾ ಕೇಂದ್ರದ ಬಗ್ಗೆ ಮಾತ್ರ ಎಫ್ಐಆರ್ ದಾಖಲಿಸಿದೆ. ಪರೀಕ್ಷಾರ್ಥಿಗಳು ಹಲವು ಕೇಂದ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಅವುಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮರು ಪರೀಕ್ಷೆ ಮಾಡಬೇಕೆಂದ ಸರ್ಕಾರ ಮತ್ತೆ 545 ಮಂದಿಯ ಒಎಂಆರ್ ಶೀಟ್ ತರಿಸಿಕೊಂಡಿದ್ದಾದರೂ ಏಕೆ..? ಇಲ್ಲಿ ಸರ್ಕಾರದ ದಡ್ಡತನವೆ ಎದ್ದು ಕಾಣುತ್ತಿದೆ. 300 ಜನರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಅವರೇ ಹೇಳಿ, ಈವರೆಗೆ ಎಷ್ಟು ಜನರನ್ನು ಅರೆಸ್ಟ್ ಮಾಡಿದ್ದಾರೆ? ಒಂದೆರಡು ಕಿಂಗ್ ಪಿನ್ ಸಿಕ್ಕರೆ ಅದರಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಇದನ್ನೂ ಓದಿ: ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆಗಳನ್ನು ಕಲಿಸಬೇಕು: ಧನ್ ಸಿಂಗ್ ರಾವತ್
ರಾಜ್ಯಕ್ಕೆ 3ನೇ ಸಿಎಂ ಸಿಗಲಿದ್ದಾರೆ: ಬಿಟ್ಕಾಯಿನ್ ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂ ಸಿಗಲಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ. ಇಂದಿಗೂ ನಾನು ಅದನ್ನೇ ಹೇಳುತ್ತೇನೆ ಬಿಟ್ ಕಾಯಿನ್ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ 3 ನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಕುಟುಕಿದರು.