ಬೆಂಗಳೂರು: ಬಾಡಿಗೆ ಕಟ್ಟಲು ಎತ್ತಿಟ್ಟ ಹಣವನ್ನು ಒಡವೆ ಖರೀದಿಗೆ ಖರ್ಚು ಮಾಡಿದಕ್ಕೆ ಪತ್ನಿ ಮೇಲೆ ಹಲ್ಲೆ ನಡೆಸಿ ಪತಿಯೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ನಾಜಿಯಾ ಎಂದು ಗುರುತಿಸಲಾಗಿದ್ದು, ಈ ಘಟನೆ ನವೆಂಬರ್ 2ರಂದು ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಪತಿ ಫಾರೂಕ್ ಮನೆ ಬಾಡಿಗೆಗೆಂದು ಹಣ ಕೂಡಿಟ್ಟಿದ್ದರು. ಆದರೆ ಒಡವೆ ಮೇಲೆ ಆಸೆ ಹೊಂದಿದ್ದ ಪತ್ನಿ ಬಾಡಿಗೆಗೆಂದು ಕೂಡಿಟ್ಟ 6,500 ರೂ. ಹಣ ಖರ್ಚು ಮಾಡಿ ಡ್ಯೂಪ್ಲಿಕೇಟ್ ಜ್ಯುವೆಲ್ಲರಿಯನ್ನು ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಬಾಡಿಗೆ ಹಣ ನೀಡುವಂತೆ ಪತಿ ಕೇಳಿದಾಗ ಪತ್ನಿ ಹಣ ಖರ್ಚು ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಜಿಯಾ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಪತ್ನಿಯನ್ನು ಕೂಡಲೇ ಫಾರೂಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ನಾಜಿಯಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ವಸೂಲಿ ಮಾಡ್ತೀವಿ: ಈಶ್ವರಪ್ಪ
ಈ ಸಂಬಂಧ ಮೃತಳ ಪೋಷಕರು ಫಾರೂಕ್ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ಫಾರೂಕನ್ನು ಬಂಧಿಸಿದ್ದಾರೆ.