ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಇತ್ತೀಚೆಗಷ್ಟೇ ಹಲವು ಭಾಷೆಗಳಲ್ಲಿ ‘ಓ ಪರಿ’ ಎನ್ನುವ ಹಾಡೊಂದನ್ನು ಹೊರ ತಂದಿದ್ದರು. ಈ ಹಾಡಿನ ಸಾಹಿತ್ಯದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಹಾಗೂ ಧಾರ್ಮಿಕ ಪಠಣಗಳಿರುವ ಹಾಡಿನಲ್ಲಿ ನೃತ್ಯ ಮಾಡುವವರು ಅರೆಬರೆ ಬಟ್ಟೆ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಕರಾಟೆ ಕಲ್ಯಾಣಿ ಅನ್ನುವವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಹಿಂದೂ ಭಾವನೆಗಳಿಗೆ ಧಕ್ಕೆ ವಿಚಾರವಾಗಿ ದೇವಿ ಶ್ರೀ ಪ್ರಸಾದ್ ಮೇಲೆ ದೂರು ಸಲ್ಲಿಕೆ ಆಗುತ್ತಿದ್ದಂತೆಯೇ ಹೈದರಾಬಾದ್ ನಗರ ಪೊಲೀಸರು ಅವರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆಯನ್ನೂ ಶುರು ಮಾಡಿದ್ದಾರೆ. ತುಂಡುಡುಗೆ ತೊಟ್ಟು ಡಾನ್ಸ್ ಮಾಡಿದ ಹಾಡಿನಲ್ಲಿ ‘ಹರೇ ಕೃಷ್ಣ ಹರೇ ರಾಮ’ ಎಂದು ಜಪಿಸಲಾಗುತ್ತಿದೆ. ಪವಿತ್ರ ಶ್ಲೋಕಗಳನ್ನು ಹೇಳಲು ಸಾಧ್ಯವಾಗದೇ ಇದ್ದಾಗ ಈ ಪವಿತ್ರ ಸಾಲುಗಳನ್ನು ಹೇಳಲಾಗುತ್ತದೆ. ಇಂತಹ ಸಾಲುಗಳನ್ನು ಹೇಳುವಾಗ ನೃತ್ಯ ಮಾಡುವವರು ಅಶ್ಲೀಲವಾಗಿ ಕಂಡಿದ್ದಾರೆ ಎನ್ನುವುದು ದೂರು ನೀಡಿದವರ ಆರೋಪ. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ
ಕರಾಟೆ ಕಲ್ಯಾಣಿ ಮತ್ತು ಲಲಿತ್ ಕುಮಾರ್ ಜಂಟಿಯಾಗಿ ಹೈದರಾಬಾದ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆಯೇ ಪೊಲೀಸರು ದೇವಿಶ್ರೀ ಪ್ರಸಾದ್ ಮೇಲೆ ಐಪಿಸಿ ಸೆಕ್ಷನ್ 153 (ಎ) ಮತ್ತು 295 (ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಆಂಧ್ರ ಪ್ರದೇಶದ ಬಿಜೆಪಿ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಂಗೀತ ನಿರ್ದೇಶಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.