– ಆಧಾರ್ ಕಾರ್ಡ್ ಮಾಡಿಸಲು ಅಪ್ಪನ ಜೊತೆಗೆ ಬಂದಿದ್ದ ಬಾಲಕ
ಹುಬ್ಬಳ್ಳಿ: ಟ್ಯಾಂಕರ್ ಲಾರಿ ಹರಿದು ಬಾಲಕನೊಬ್ಬ ಅಪ್ಪಚ್ಚಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ನಿವಾಸಿ ವೀರೇಶ್ ಹಿರೇಮಠ (7) ಮೃತ ಬಾಲಕ. ವೀರೇಶ್ ಆಧಾರ್ ಕಾರ್ಡ್ ಮಾಡಿಸಲು ಅಜ್ಜಿ, ಅಪ್ಪ ಹಾಗೂ ಅಣ್ಣನ ಜೊತೆ ಇಂದು ಹೊರಟಿದ್ದ. ಈ ವೇಳೆ ಹುಬ್ಬಳ್ಳಿಯ ಸಾಯಿಬಾಬಾ ಮಂದಿರ ಬಳಿ ಸೈಕಲ್ ಹಿಡಿದು ರಸ್ತೆ ದಾಟುತ್ತಿದ್ದಾಗ ಆತನ ಮೇಲೆ ಟ್ಯಾಂಕರ್ ಲಾರಿ ಹರಿದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಲಕನ ಮೇಲೆ ಲಾರಿ ಹರಿಯುತ್ತಿದ್ದಂತೆ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದಾಗಿ ಸಂಚಾರ ಅಸ್ತವ್ಯಸ್ತವಾಯಿತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಾಲಕನ ಮೃತದೇಹವನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.
ಈ ಕುರಿತು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.