ಹುಬ್ಬಳ್ಳಿ: ವಿವಾದಿತ ಪೋಸ್ಟ್ನಿಂದ ಹುಬ್ಬಳ್ಳಿಯಲ್ಲಿ ಗಲಭೆ ನಡೆದ ಬಳಿಕ ದಿನಕ್ಕೊಂದು ರಹಸ್ಯಗಳು ಬಯಲಾಗುತ್ತಿವೆ. ನೆನ್ನೆಯಷ್ಟೇ ಮುಸ್ಲಿಂ ಮೌಲ್ವಿಯಂತೆ ವೇಷ ಧರಿಸಿ ಬಂದಿದ್ದ ಲಾರಿಚಾಲಕನ ಅಸಲಿ ರೂಪ ಬಯಲಾಗಿತ್ತು. ಈ ಬೆನ್ನಲ್ಲೇ ಗಲಭೆಗೆ ಮತ್ತೊಂದು ಪ್ರಮುಖ ಕಾರಣ ಏನೆಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಳೆದ ಮೂರು ತಿಂಗಳಿನಿಂದಲೂ ಮುಸ್ಲಿಮರ ವಿರುದ್ಧ ನಡೆದ ಸಾಲು ಸಾಲು ಅಭಿಯಾನಗಳೇ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ. ರಾಮನವಮಿ ದಿನದಂದೇ ಗಲಾಟೆ ನಡೆಯುವ ಸಾಧ್ಯತೆಗಳಿತ್ತು. ಏಕೆಂದರೆ ಹುಬ್ಬಳ್ಳಿಯ ಪೆಂಡಾರ್ ಗಲ್ಲಿಯ ಮಸೀದಿಯ ಮೇಲೆ ಕಿಡಿಗೇಡಿಗಳು `ಜೈಶ್ರೀರಾಮ್’ ಘೋಷಣೆಯನ್ನು ಲೇಸರ್ ಲೈಟ್ ಮೂಲಕ ಹಾಕಿದ್ದರು. ಇದನ್ನು ಮುಸ್ಲಿಂ ಮುಖಂಡರು ತಡೆದಿದ್ದರು. ಈ ಬೆನ್ನಲ್ಲೇ ವಿವಾದಿತ ಪೋಸ್ಟ್ ಹಾಕುತ್ತಿದ್ದಂತೆ ಮುಸ್ಲಿಂ ಸಮುದಾಯದವರು ರೊಚ್ಚಿಗೆದ್ದು, ಗಲಾಟೆ ಹಿಂಸಾತ್ಮಕ ರೂಪ ಪಡೆದಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು
ವಿವಾದಿತ ಪೋಸ್ಟ್ ಹಾಕಿದ್ದ ಅಭಿಷೇಕ್ನನ್ನು ಮುಗಿಸಲು ಸ್ಕೆಚ್ ಹಾಕಿದ್ದರು. ಗಲ್ಲಿ-ಗಲ್ಲಿಗಳಲ್ಲೂ ಗಲಾಟೆಗೆ ಪ್ಲಾನ್ ನಡೆದಿತ್ತು. ಆದರೆ, ಅಭಿಷೇಕ್ನನ್ನೂ ಪೊಲೀಸರೇ ಬಚಾವ್ ಮಾಡಿದ್ದರು. ಇದರಿಂದ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಕಿಡಿಗೇಡಿಗಳು ಇಬ್ಬರು ಪೊಲೀಸರನ್ನು ಕೊಲೆ ಮಾಡುವುಕ್ಕೂ ಯತ್ನಿಸಿದ್ದರು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಮಸೀದಿ ಮೈಕ್ ವಿರುದ್ಧ ಕ್ರಮಕ್ಕೆ ಡೆಡ್ಲೈನ್- ರಂಜಾನ್ ಒಳಗೆ ತೆರವಾಗದಿದ್ರೆ ಮಹಾ ಆರತಿ ಎಚ್ಚರಿಕೆ
ಅದಕ್ಕಾಗಿ ಹುಬ್ಬಳ್ಳಿ ಕಿಂಗ್ಸ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ವಸೀಂ ಪಠಾಣ್, ಇರ್ಫಾನ್, ಮೊಹ್ಮದ್ ಆರಿಫ್ ನೀಡಿದ ಕರೆಯ ಮೇರೆಗೆ ಜನ ಜಮಾವಣೆಗೊಂಡಿದ್ದರು. ಇತ್ತ ಎಐಎಂಐಎಂ ಮುಖಂಡ ಇರ್ಫಾನ್ ತನ್ನ ವಾರ್ಡ್ ಜನರನ್ನು ಕರೆತಂದಿದ್ದರು. ಸದ್ಯ ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ನೀಡಿದ್ದ ಮೊಹ್ಮದ್ ಆರಿಫ್ನನ್ನು ಪೊಲೀಸರು ಬಂಧಿಸಿದ್ದಾರೆ.