ಮಂಡ್ಯ: ತಾಯಿ ಪ್ರೀತಿ ಮುಂದೆ ಎಲ್ಲವೂ ನಶ್ವರ. ಅದರಲ್ಲೂ ಪ್ರಾಣಿಗಳ ಪ್ರೀತಿ ಮುಂದೆ ಮಾನವನು ಕೂಡ ಕಣ್ಣೀರು ಹಾಕಬೇಕು. ಇಲ್ಲೊಂದು ಕುದುರೆ ಮರಿ ಶ್ವಾನಗಳ ದಾಳಿಗೆ ಬಲಿಯಾಗಿದೆ. ತನ್ನ ಮರಿ ಸಾವಿಗೀಡಾದ ನೋವಿನಿಂದ ಹೊರ ಬರದ ತಾಯಿ ಕುದುರೆ ಸುಮಾರು 5 ಗಂಟೆಗಳ ಕಾಲ ಮರಿಯ ಮೃತದೇಹದ ಮುಂದೆ ನಿಂತು ರೋದನೆ ವ್ಯಕ್ತಪಡಿಸಿತ್ತು.
ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ಈ ದೃಶ್ಯ ಕಂಡು ಬಂದಿದೆ. ಗ್ರಾಮದ ಟಬು ಎಂಬವರು ಕುದುರೆ ಹಾಗೂ ಮರಿಯನ್ನು ಸಾಕಿದ್ದರು. ಸೋಮವಾರ ರಾತ್ರಿ ಟಬು ತಮ್ಮ ಮನೆಯ ಮುಂದೆ ಕುದುರೆ ಹಾಗೂ ಮರಿಯನ್ನು ಕಟ್ಟಿದ್ದರು.
ಈ ವೇಳೆ ನಾಯಿಗಳ ಹಿಂಡು ಕುದುರೆ ಮರಿಯನ್ನು ಎಳೆದೊಯ್ದು ಕಚ್ಚಿ ಸಾಯಿಸಿವೆ. ಮರಿಯ ಸಾವಿನಿಂದ ಕಂಗಾಲಾದ ತಾಯಿ ಕುದುರೆ ಮೃತ ಮರಿ ಕುದುರೆ ಮುಂದೆ ನಿಂತ ಮೂಕ ರೋದನೆ ವ್ಯಕ್ತಪಡಿಸಿತ್ತು. ಮೃತ ಕುದುರೆ ಮರಿ ಬಳಿ ತೆರಳಲು ಯಾರಿಗೂ ಅವಕಾಶ ಕೊಡದೆ ರೋಧನೆ ಅನುಭವಿಸಿತು.
ಮರಿಯ ಮುಂದೆ ನಿಂತ ಕುದುರೆ ಸ್ಥಿತಿ ಕಂಡು ಸ್ಥಳೀಯರು ಕಂಬಿನಿ ಮಿಡಿದರು. ಕಳೆದ ಹಲವು ದಿನಗಳಿಂದ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.