ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಧನ್ಯವಾದ ತಿಳಿಸಿದ್ದಾರೆ.
ಈ ಸಂಬಂಧ ತಮ್ಮ ಮಾಧ್ಯಮ ಹೇಳಿಕೆಯಲ್ಲಿ, ಯುವತಿಯ ಮೇಲೆ ಆ್ಯಸಿಡ್ ಎರಚುವಿಕೆಯಂತಹ ಅಮಾನುಷ ಕೃತ್ಯ ಎಸಗಿ ಪರಾರಿಯಾಗಿದ್ದ ಕಿರಾತಕ ನಾಗೇಶ್ ಎಂಬ ಆರೋಪಿಯನ್ನು ನಮ್ಮ ಪೊಲೀಸರು, ಅತ್ಯಂತ ಶ್ರಮ ಹಾಗೂ ದಕ್ಷತೆಯಿಂದ ನೆರೆಯ ತಮಿಳುನಾಡು ರಾಜ್ಯದಲ್ಲಿ ಅಡಗಿದ್ದವನನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಕರೆತರುವಾಗ ಎಸ್ಕೇಪ್ ಆಗಲು ಯತ್ನ- ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು
ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟುವುದರ ಮೂಲಕ ನಮ್ಮ ಪೊಲೀಸರು, ದೇಶದಲ್ಲಿಯೇ ಅತ್ಯಂತ ದಕ್ಷತೆಯ ಹಾಗೂ ವೃತ್ತಿಪರ ಪಡೆಯೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತನೆ. ಇತ್ತ ಹೀನ ಕೃತ್ಯ ನಡೆಸಿದವನನ್ನು ಬಂಧಿಸುವ ಕಾರ್ಯದಲ್ಲಿ ತಮಿಳುನಾಡು ಪೊಲೀಸರು ನಮ್ಮ ಪೊಲೀಸರಿಗೆ ನೆರವಾಗಿದ್ದಾರೆ. ಅವರಿಗೂ ನನ್ನ ಅಭಿನಂದನೆಗಳು ಎಂದರು. ಇದನ್ನೂ ಓದಿ: ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್
ಆರೋಪಿಗೆ ಉಗ್ರ ಶಿಕ್ಷೆಯಾಗುವಂತೆ, ಆತನನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಎಲ್ಲಾ ರೀತಿಯ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರೋಪಿಗೆ ತಕ್ಕ ಶಿಕ್ಷೆ ಆಗುವ ಮೂಲಕ ಸಂತ್ರಸ್ತ ಮಹಿಳೆಗೆ ಹಾಗೂ ಕುಟುಂಬ ವರ್ಗಕ್ಕೆ ಸ್ವಲ್ಪವಾದರೂ ನೆಮ್ಮದಿ ದೊರಕಿದಂತಾಗುವುದು ಎಂದು ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದು, ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು