ಬೆಂಗಳೂರು: ಬೆಂಕಿ ಇಡುವುದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.
ಗುರುವಾರ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಪೊಲೀಸರು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಯಾರು ಕಾರಿಗೆ ಬೆಂಕಿ ಹಾಕಿದ್ದಾರೆ ನೋಡಬೇಕು. ಸಾರ್ವಜನಿಕವಾಗಿ ಹೀಗೆ ಬೆಂಕಿ ಇಡುವುದು ಸರಿನಾ? ನಮ್ಮ ಕಾರಿಗೆ ನಾವು ಬೆಂಕಿ ಹಾಕಿದ್ದೇವೆ ಅಂತ ಹೇಳಬಹುದು. ಹಾಗಾದರೆ ಅವರ ಮನೆಗೆ ಬೆಂಕಿ ಹಾಕಿಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ಬೆಂಕಿ ಹಾಕುವುದಲ್ಲ ಅಂತ ಕಿಡಿಕಾರಿದರು. ಇದು ಯಾವ ರೀತಿ ಪ್ರತಿಭಟನೆ. ಕಾಂಗ್ರೆಸ್ ಅವರಿಗೆ ನಾಚಿಕೆಯಾಗಬೇಕು. ಇಷ್ಟು ವರ್ಷ ಸರ್ಕಾರ ಮಾಡಿದ್ದಾರೆ. ಹೇಗೆ ಪ್ರತಿಭಟನೆ ಮಾಡಬೇಕು ಅಂತ ಗೊತ್ತಿಲ್ಲವಾ? ಸಾರ್ವಜನಿಕವಾಗಿ ಅಸಹ್ಯ ಆಗುವ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾಜಿ ಸಚಿವ ರಮೇಶ್ ಕುಮಾರ್ 3-4 ತಲೆಮಾರಿಗೆ ಆಗುವಷ್ಟು ಮಾಡಿದ್ದೇವೆ ಎಂಬ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ರಮೇಶ್ ಕುಮಾರ್ ಆಗಾಗ ಇಂತಹ ಸತ್ಯ ಹೇಳುತ್ತಾರೆ. ಇಂತಹ ಸತ್ಯ ಹೇಳುವುದಕ್ಕೆ ರಮೇಶ್ ಕುಮಾರ್ಗೆ ಮಾತ್ರ ಸಾಧ್ಯ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ನನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ವಿಮಾನದಲ್ಲಿ ರಂಪಾಟ ಮಾಡಿದ ಪ್ರಯಾಣಿಕ – ಬೆಚ್ಚಿಬಿದ್ದ ಸಹಪ್ರಯಾಣಿಕರು
ದೇಶದ ಸಂಪತ್ತನ್ನು ಕಾಂಗ್ರೆಸ್ ಅವರು ಲೂಟಿ ಮಾಡಿದ್ದಾರೆ. ಇದಕ್ಕೆ ರಮೇಶ್ ಕುಮಾರ್ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್ ಅವರು ದೇಶದ ಜನರ ಕ್ಷಮೆ ಕೇಳಬೇಕು. ದೇಶದ ಮುಂದೆ ಪಶ್ಚಾತಾಪ ಪಡಬೇಕು. ತಲೆಮಾರುಗಟ್ಟಲೆ ಕೂತು ತಿನ್ನುವುದಕ್ಕೆ ಮಾಡಿದ ಹಣವನ್ನು ಇವರು ಕಕ್ಕಬೇಕು. ಈ ದೇಶ ಲೂಟಿ ಮಾಡಿದ್ದಾರೆ. ಲೂಟಿ ಮಾಡಿದ ಹಣ ದೇಶದ ಖಜಾನೆಗೆ ಮತ್ತೆ ತುಂಬಬೇಕು. ಕಾಂಗ್ರೆಸ್ ಅವರು ವಿಚಿತ್ರವಾಗಿ ಆಟ ಆಡುತ್ತಿದ್ದಾರೆ. ಸೋನಿಯಾ ಗಾಂಧಿ ಕುಟುಂಬ ಸಂವಿಧಾನ, ಕಾನೂನಿನ ಅಡಿ ಇರುವವರು. ಅವರನ್ನು ವಿಚಾರಣೆಗೆ ಕರೆಯುವುದು ತಪ್ಪಾ? ಇವರೇನು ಕಾನೂನಿಗೆ ಅತೀತರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೋವಿಡ್ ಫೈಲ್ಸ್ ಸಿನಿಮಾ ಘೋಷಣೆ ಮಾಡಿದ ರಾಮ್ ಗೋಪಾಲ್ ವರ್ಮಾ
ಸಾರ್ವಜನಿಕರಿಗೊಂದು ಕಾನೂನು ಈ ಕುಟುಂಬಕ್ಕೆ ಒಂದು ಕಾನೂನು ಇದೆಯಾ? ಕಾನೂನು ಮುಂದೆ ಎಲ್ಲರೂ ಒಂದೆ. ತಪ್ಪು ಮಾಡಿದರೆ ಜೈಲಿಗೆ ಹೋಗುತ್ತಾರೆ. ಇಲ್ಲ ಅಂದರೆ ರಿಲೀಸ್ ಆಗುತ್ತಾರೆ. ವಿಚಾರಣೆ ಮಾಡುವ ಹಕ್ಕು ಪೊಲೀಸರು, ಇಡಿಗೆ ಅಧಿಕಾರ ಇದೆ. ಇವರ ಸರ್ಕಾರ ಇದ್ದಾಗ ಎಷ್ಟು ಜನರ ವಿಚಾರ ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ. ಇಂತಹ ಕೀಳು ಮಟ್ಟದ ಹೋರಾಟ ಸರಿಯಲ್ಲ. ಇಂತಹ ಪ್ರತಿಭಟನೆ ಮಾಡಿ ಜನರ ಮುಂದೆ ಕಾಂಗ್ರೆಸ್ ಬೆತ್ತಲೆ ಆಗುತ್ತಿದ್ದಾರೆ ಅಂತ ಕಿಡಿಕಾರಿದರು.