ಹಾವೇರಿ: ನಾಮಪತ್ರ ಸಲ್ಲಿಸಿದ ನಂತರ ಜೆಡಿಎಸ್ ಅಭ್ಯರ್ಥಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಮಠದಲ್ಲಿ ಕಾಣುತ್ತಿಲ್ಲ ಎಂಬ ಆತಂಕ ಭಕ್ತರಲ್ಲಿ ಮನೆ ಮಾಡಿತ್ತು. ಆದರೆ ಅವರದ್ದೇ ಎನ್ನಲಾದ ಆಡಿಯೋ ಇದೀಗ ಬಿಡುಗಡೆಯಾಗಿದ್ದು, ಸೇಫ್ ಆಗಿದ್ದೇನೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸನಗೌಡ್ರ ಜೊತೆ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ನಾನು ಸೇಫ್ ಆಗಿದ್ದೇನೆ, ಹರಿಬ್ರಹ್ಮ ಬಂದರೂ ನನ್ನ ನಿಲುವು ಬದಲಾಗುವುದಿಲ್ಲ. ನವೆಂಬರ್ 21, ರಂದು ಸಂಜೆ ಬರುತ್ತೇನೆ ಎಂದು ಆಡಿಯೋದಲ್ಲಿ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗೆ ಟಿಕೆಟ್, ಕೌರವನಿಗೆ ಶಾಕ್ ಕೊಡಲು ಜೆಡಿಎಸ್ ನಿರ್ಧಾರ
ನಾಮಪತ್ರ ಸಲ್ಲಿಕೆ ನಂತರ ಸ್ವಾಮೀಜಿ ಮಠದಲ್ಲಿ ಕಾಣಿಸಿಕೊಂಡಿರಲಿಲ್ಲ. ನಿಮ್ಮ ಸಹವಾಸವೇ ಸಾಕು ಎಂದು ಶ್ರೀಗಳು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ನಾಮಪತ್ರ ವಾಪಸ್ ಪಡೆಯುವಂತೆ ಬಿಜೆಪಿ ಮುಖಂಡರಿಂದ ಒತ್ತಡ ಹೆಚ್ಚಾಗಿತ್ತು. ಕರೆ ಹಾಗೂ ಸಂದೇಶಗಳ ಮೂಲಕ ಸ್ವಾಮೀಜಿಗೆ ಒತ್ತಾಯ ಮಾಡುತ್ತಿದ್ದರು. ಇದರಿಂದ ಬೇಸತ್ತ ಸ್ವಾಮೀಜಿ ಮಠದಿಂದ ಕಾಣೆಯಾಗಿದ್ದಾರೆ. ಆದರೆ ಸ್ವಾಮೀಜಿ ಸುರಕ್ಷಿತ ಸ್ಥಳದಲ್ಲಿದ್ದಾರೋ ಇಲ್ಲವೋ ಎಂಬುದು ಭಕ್ತರ ಆತಂಕವಾಗಿತ್ತು ಇದೀಗ ಸ್ವಾಮೀಜಿಗಳದ್ದು ಎನ್ನಲಾದ ಆಡಿಯೋ ಹರಿದಾಡುತ್ತಿದೆ.
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.