ಬೆಂಗಳೂರು: ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜನೆಗೊಂಡಿರುವ ವೀರ್ ದಾಸ್(Vir Das) ಕಾಮಿಡಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆ ಆಗ್ರಹಿಸಿದೆ.
ಹಿಂದೂ ಜನಜಾಗೃತಿ ಸಮಿತಿಯ(Hindu Janajagriti Samiti) ರಾಜ್ಯ ವಕ್ತಾರ ಮೋಹನ ಗೌಡ, ಶ್ರೀರಾಮಸೇನೆಯ ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ ನೇತೃತ್ವದಲ್ಲಿ ವೈಯಾಲಿಕವಲ್ ಪೋಲಿಸ್ ಠಾಣೆಯಲ್ಲಿ ಸಂಘಟನೆಗಳು ದೂರು ನೀಡಿವೆ.
ಮೋಹನ ಗೌಡ ಪ್ರತಿಕ್ರಿಯಿಸಿ, ವೀರ್ ದಾಸ್ ಎನ್ನುವ ವಿವಾದಿತ ಕಾಮಿಡಿಯನ್ ನ.12 ರಂದು ಕಾಮಿಡಿ ಶೋವನ್ನು ಆಯೋಜನೆ ಮಾಡಿರುವುದು ಗಮನಕ್ಕೆ ಬಂದಿದೆ. ಈ ಹಿಂದೆ ಈತ ಅಮೆರಿಕದಲ್ಲಿ ಭಾರತದ(India) ಬಗ್ಗೆ ಅತ್ಯಂತ ಕೆಟ್ಟದಾಗಿ ಕಾಮಿಡಿ ಮಾಡಿ ಅವಹೇಳನ ಮಾಡಿದ್ದನು. ಈ ಕಾರಣಕ್ಕಾಗಿ ಮುಂಬೈ ಪೋಲಿಸರು ಇವನ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ಹೀಗೆ ವಿದೇಶದಲ್ಲಿ ಭಾರತದ ಪ್ರಧಾನಿ ಭಾರತದ ಮಹಿಳೆಯರ ವಿರುದ್ಧ ಮತ್ತು ಭಾರತದ ಘನತೆಯ ಬಗ್ಗೆ ಅತ್ಯಂತ ಕೆಟ್ಟದಾಗಿ ಅಪಮಾನ ಮಾಡಿದ್ದಾನೆ ಎಂದು ದೂರಿದರು. ಇದನ್ನೂ ಓದಿ: ಹಿಂದೂ ಪದದ ಅರ್ಥವೇ ಅಶ್ಲೀಲ – ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್
ಈತ ಕೆಲವು ದಿನಗಳ ಹಿಂದೆ ಅಮೇರಿಕದ ವಾಷಿಗ್ಟನ್ ಡಿಸಿಯಲ್ಲಿ ಮಾತನಾಡಿದ ಒಂದು ವಿಡಿಯೋದಲ್ಲಿ ತಾನು ಎಲ್ಲಿ ಮಹಿಳೆಯರನ್ನು ಬೆಳಗ್ಗೆ ಪೂಜೆ ಮಾಡಿ ರಾತ್ರಿ ಅವರ ಮೇಲೆ ಅತ್ಯಾಚಾರ ಮಾಡುವ ಭಾರತದಿಂದ ಬಂದಿದ್ದೇನೆ ಎಂದು ದೇಶದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಅಪಮಾನ ಮಾಡಿದ್ದಾನೆ. ಇದು ಭಾರತದ ದಂಡ ಸಂಹಿತೆಯ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಿರುವಾಗ ಇಂತಹ ವಿವಾದಿತ ವ್ಯಕ್ತಿ ಬೆಂಗಳೂರಿನಂತಹ ಅತ್ಯಂತ ಕೋಮು ಸೂಕ್ಚ್ಮ ಪ್ರದೇಶದಲ್ಲಿ ಈ ರೀತಿಯ ವಿವಾದಿತ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಹೇಳಿದರು.
ಈಗಾಗಲೇ ಕರ್ನಾಟಕದಲ್ಲಿ(Karnataka) ಕೋಮು ಘಟನೆಗಳ ಪ್ರಕರಣದಿಂದ ಅನೇಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಎದುರಿಸುತ್ತಿರುವಾಗ ಪುನಃ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಕೂಡಲೇ ಈ ಕಾರ್ಯಕ್ರಮವನ್ನು ರದ್ದು ಮಾಡಬೇಕು ಎಂದು ಮೋಹನ್ ಗೌಡ ಆಗ್ರಹಿಸಿದರು.