ಮಂಗಳೂರು: ನಗರದಲ್ಲಿ ಇಂದು ಬೆಳಗ್ಗೆ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳು, ಆಹಾರ ಪದಾರ್ಥಗಳು ನೀರು ಪಾಲಾಗಿದ್ದು, ರಸ್ತೆಗಳೆಲ್ಲ ನೀರು ತುಂಬಿಕೊಂಡು ಕೆರೆಯಂತಾಗಿದೆ.
ಇಂದು ಮುಂಜಾನೆಯಿಂದ ಮೂರ್ನಾಲ್ಕು ಗಂಟೆ ನಿರಂತರವಾಗಿ ಸುರಿದ ಮಳೆಗೆ ಶಿವನಗರದಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತಗಳೆಲ್ಲಾ ನೀರಿನಲ್ಲಿ ತೇಲಿದವು. ಎಲೆಕ್ಟ್ರಾನಿಕ್ ಉಪಕರಣಗಳು, ಹಾಸಿಗೆ, ಪಾತ್ರೆಗಳು, ಆಹಾರ ಪದಾರ್ಥಗಳೆಲ್ಲಾ ನೀರು ಪಾಲಾದವು. ಮನೆಯಿಂದ ನೀರು ಹೊರಹಾಕಲು ಇಲ್ಲಿನ ನಿವಾಸಿಗಳು ಹರಸಾಹಸಪಟ್ಟರು. ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿ ಇರಲಾಗದೆ ಮನೆಯಿಂದ ಹೊರ ಬಂದು ಕಾಲ ಕಳೆಯಬೇಕಾಯಿತು. ಸ್ಥಳಕ್ಕೆ ಮಹಾನಗರ ಪಾಲಿಕೆ ಸಿಬ್ಬಂದಿ ಆಗಮಿಸಿ ಕಸ ಕಟ್ಟಿಕೊಂಡಿದ್ದ ಡ್ರೈನೇಜ್, ಚರಂಡಿಗಳನ್ನು ಸ್ವಚ್ಛ ಮಾಡಿದರು. ಶಿವನಗರದ ರಸ್ತೆಗಳೆಲ್ಲೆಲ್ಲಾ ನೀರು ತುಂಬಿಕೊಂಡು ಕೆರೆಯಂತಾಗಿದ್ದರೆ, ವಾಹನಗಳು ನೀರಿನಲ್ಲಿ ತೇಲಿದವು. ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ 3 ದಿನಗಳ ಕಾಲ ಕಟ್ಟೆಚ್ಚರ – ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ
ಶಿವನಗರದಲ್ಲಿ ರಾಜಕಾಲುವೆ ಪಕ್ಕದಲ್ಲಿ ಮನೆಗಳಿದ್ದು ಮಳೆಗಾಲದಲ್ಲಿ ಕಾಲುವೆ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಬಗ್ಗೆ ಹತ್ತಾರು ಬಾರಿ ಜನಪ್ರತಿನಿಧಿಗಳು, ಮಹಾನಗರಪಾಲಿಕೆ ಗಮನಕ್ಕೆ ತಂದರೂ ಯಾರೂ ಕೂಡ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದಿಲ್ಲ. ಮನೆಗಳಿಗೆ ನೀರು ನುಗ್ಗಿದ ವೇಳೆ ಬಂದು ನೋಡಿ ಭರವಸೆ ನೀಡಿ ಹೋಗುತ್ತಿದ್ದು ಇನ್ನಾದರೂ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್
ಮಳೆಯಿಂದ ಮನೆ, ಮನುಷ್ಯರು ಮಾತ್ರ ಸಂಕಷ್ಟಕ್ಕೆ ಸಿಲುಕಿಲ್ಲ. ಮೂಕ ಪ್ರಾಣಿಗಳು ಮಳೆಯಿಂದ ನರಳಾಡಿದವು. ಶಿವನಗರದ ಮನೆಯೊಂದರಲ್ಲಿ ಬೆಕ್ಕು ಮರಿಗಳನ್ನು ಹಾಕಿದ್ದು, ಮನೆಗೆ ನೀರು ನುಗ್ಗಿದ್ದರಿಂದ ಮರಿಗಳು ನೀರಿನಲ್ಲಿ ಮುಳುಗುತ್ತಿದ್ದು ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ಪರದಾಡಿತು. ಬಾಯಲ್ಲಿ ಮರಿಗಳನ್ನು ಕಚ್ಚಿಕೊಂಡು ಮನೆಯಲ್ಲಿದ್ದ ಮಂಚದ ಮೇಲೆ ತಂದು ಬಿಟ್ಟು ಮರಿಗಳನ್ನು ರಕ್ಷಿಸಿತು. ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.