ಕಾರವಾರ/ಶಿವಮೊಗ್ಗ: ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಗೆ ಶರಾವತಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಲಿಂಗನಮಕ್ಕಿ ಜಲಾಶಯ ಭಾಗದ ಹಿನ್ನೀರಿನ ಭಾಗದಲ್ಲಿ ಹೆಚ್ಚಿನ ಮಳೆಯಾಗುತಿದ್ದು, ಇಂದು ಜಲಾಶಯದಲ್ಲಿ 30,397 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಕಳೆದ ತಿಂಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದು ಜಲಾಶಯದ ಒಳಹರಿವಿನಲ್ಲಿ ನೀರಿನ ಪ್ರಮಾಣ ಗಣನೀಯ ಏರಿಕೆ ಕಂಡಿತ್ತು.
ಇಂದು ಏರಿಕೆ ಕಂಡ ಪ್ರಮಾಣವೆಷ್ಟು?: ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಮಟ್ಟವು 1,819 ಅಡಿ ಇದೆ. ಜಲಾಶಯದ ಭರ್ತಿಗೆ 17.65 ಅಡಿ ಮಾತ್ರ ಬಾಕಿ ಇದೆ. ಪ್ರಸ್ತುತ ಜಲಾಶಯದಲ್ಲಿ 1,801.35 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥ – 18 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
ಜನರಿಗೆ ಮುನ್ನೆಚ್ಚರಿಕೆ: ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾದ್ದರಿಂದ ಜನರಿಗೆ ಮೊದಲ ಎಚ್ಚರಿಕೆ ರವಾನಿಸಲಾಗಿದೆ. ಜಲಾಶಯದ ನೀರಿನ ಮಟ್ಟ ಪ್ರತಿಕ್ಷಣ ಏರಿಕೆ ಕಾಣುತ್ತಿದೆ. ಇನ್ನೂ ಹೆಚ್ಚಿನ ಮಳೆಯಾದರೇ ಶೀಘ್ರದಲ್ಲಿ ಭರ್ತಿಯಾಗುವ ಸಾಧ್ಯತೆ ಇದ್ದು, ಆಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಾದರೂ ನೀರನ್ನು ಹೊರಬಿಡಲಾಗುತ್ತದೆ. ಆಣೆಕಟ್ಟಿನ ಕೆಳದಂಡೆ ಹಾಗೂ ನದಿ ಪಾತ್ರದಲ್ಲಿ ವಾಸವಿರುವ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಕೆ.ಪಿ.ಸಿ.ಕಾರ್ಯಪಾಲಕ ಇಂಜಿನಿಯರ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ನಲ್ಲಿ ಬಾಂಬ್ ಸ್ಫೋಟ – 8 ಮಂದಿ ದುರ್ಮರಣ