ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ(Rain) ಮೃತವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ಸಾಗಿಸಲು ದಾರಿ ಇಲ್ಲದೆ ಎರಡು ದಿನಗಳ ಕಾಲ ಮನೆಯಲ್ಲೇ ಇಟ್ಟುಕೊಂಡ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಸಮೀಪದ ಎಸ್.ಬೊಮ್ಮೇನಹಳ್ಳಿಯಲ್ಲಿ ನಡೆದಿದೆ.
ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ದಾರಿ ಇಲ್ಲದೆ ಜನ ಪರದಾಡಿ ಎರಡು ದಿನಗಳ ಬಳಿಕ ಅಂತ್ಯಸಂಸ್ಕಾರ ಮಾಡಿದ್ದಾರೆ. ಕಡೂರು ತಾಲೂಕಿನ ಚಿಕ್ಕ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಬೊಮ್ಮನಹಳ್ಳಿಯಲ್ಲಿ ಪ್ರಮೋದ್(55) ಎಂಬವರು ಮೃತಪಟ್ಟಿದ್ದರು. ಆದರೆ ಬಹಳ ವರ್ಷಗಳ ನಂತರ ದೇವನೂರು ಕೆರೆ(Lake) ತುಂಬಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಇದರಿಂದಾಗಿ ಈ ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ದಾರಿಯೂ ನೀರಿನಿಂದ ಜಲಾವೃತವಾಗಿ ಮೃತದೇಹ ಕೊಂಡೊಯ್ಯಲು ಸಾಧ್ಯವಾಗದೆ ಎರಡು ದಿನಗಳ ಕಾಲ ಕಾದಿದ್ದಾರೆ.
ಎರಡು ದಿನದ ನಂತರ ನೀರಿನ ಹರಿವು ತುಸು ಕಡಿಮೆಯಾದ ಬಳಿಕ, ನೀರಲ್ಲೇ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಶವ ಹೂಳಲು ಗುಂಡಿ ತೆಗೆಯಲು ಜೆಸಿಬಿ ತರಿಸಿದರೆ ಅದು ಕೂಡ ಕೆಸರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಿಕ್ಕಿಕೊಂಡು ಪರದಾಡಿದ್ದಾರೆ. ಇದನ್ನೂ ಓದಿ: ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು- ಕತ್ತಿ ನಿಧನಕ್ಕೆ ಆರಗ ಸಂತಾಪ
ಆದರೂ ಕಷ್ಟಪಟ್ಟು ಎರಡು, ಮೂರು ಕಡೆ ಗುಂಡಿ ತೆಗೆದರೂ ಅಲ್ಲಿಯೂ ನೀರು ತುಂಬಿಕೊಂಡಿದೆ. ಕೊನೆಗೂ ಸ್ವಲ್ಪ ಎತ್ತರದ ಭಾಗದಲ್ಲಿ ಗುಂಡಿ ತೆಗೆದು ಅಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ಈ ಗ್ರಾಮದಲ್ಲಿ ಈ ಸಮಸ್ಯೆ ಇಂದು-ನಿನ್ನೆಯದ್ದಲ್ಲ. ಕಳೆದ 10 ವರ್ಷಗಳಿಂದಲೂ ಇದೇ ಸಮಸ್ಯೆ ಇದೆ. ಜನಪ್ರತಿನಿಧಿಗಳ ಬಳಿ ಹಲವು ಬಾರಿ ಈ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದ ಉಮೇಶ್ ಕತ್ತಿ ತಂದೆ