ತುಮಕೂರು : ನಟ ಡಾಲಿ ಧನಂಜಯ (Dolly Dhananjay) ನಟನೆಯ ಹೆಡ್ ಬುಷ್ (Head Bush) ಚಿತ್ರದಲ್ಲಿನ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವಂತೆ ಆಗ್ರಹಿಸಿ ಪಂಚವಾದ್ಯದ ವಿನೂತನ ಪ್ರತಿಭಟನೆ (Protest) ತುಮಕೂರಿನಲ್ಲಿ ನಡೆಸಲಾಯಿತು. ತುಮಕೂರು ನಗರದ ಮಾರುತಿ ಚಿತ್ರ ಮಂದಿರ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಲ್ಲದೆ ನಿರ್ದೇಶಕ, ಕತೆ, ಸಂಭಾಷಣೆಗಾರ ಅಗ್ನಿ ಶ್ರೀಧರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ವತಿಯಿಂದ ನಡೆಸಲಾದ ಪ್ರತಿಭಟನೆಯ ನೇತೃತ್ವವನ್ನು ಶ್ರೀ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸರಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಂಚವಾದ್ಯವನ್ನು ನುಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನ ಸೆಳೆಯಲಾಯಿತು. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ
ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಬಿತ್ತರಿಸುವಂತಹ ಕಲೆಗೆ ಬಹಳಷ್ಟು ನೋವುಂಟು ಮಾಡಿದೆ. ಚಲನಚಿತ್ರದಲ್ಲಿನ ವಿವಾದಿತ ದೃಶ್ಯವನ್ನು ಕಟ್ ಮಾಡಿ ಜನರಿಗೆ ಒಳ್ಳೆಯ ಸಂದೇಶ ಸಾರುವಂತಾಗಬೇಕು ಎಂದು ಮನವಿ ಮಾಡಿದರು. ಭಾರತೀಯ ಸಂಸ್ಕೃತಿಯ ಕಲೆಗಳನ್ನು ಉಳಿಸುವಂತಹ ಬಹಳಷ್ಟು ಕಲೆಗಳಿವೆ. ಅಂತಹ ಕಲೆಗಳನ್ನು ಹೆಡ್ಬುಷ್ ಮಾತ್ರವಲ್ಲ ಯಾವುದೇ ಚಲನಚಿತ್ರಗಳು ನಮ್ಮ ಸಂಸ್ಕೃತಿಗಳನ್ನು ತುಳಿಯುವಂತಹ, ಅವಮಾನ ಮಾಡುವಂತಹ ಕೆಲಸ ಮಾಡಬಾರದು ಎಂದರು.
ನಮ್ಮ ಸಂಸ್ಕೃತಿನ ನಾವೇ ಉಳಿಸಲಿಲ್ಲ ಅಂದರೆ ಇನ್ಯಾರು ಉಳಿಸಿಯಾರು. ಮುಂದಿನ ದಿನಗಳಲ್ಲಿ ಆ ರೀತಿ ಆಗದಂತೆ ಕಾಪಾಡಬೇಕು ಎಂದು ಸ್ವಾಮೀಜಿ ಎಲ್ಲರಲ್ಲಿ ಪ್ರಾರ್ಥನೆ ಮಾಡಿದರು.