ಮೈಸೂರು: ನಾನು ಕುಮಾರಸ್ವಾಮಿ ಅವರ ಜೊತೆ ಮಾತಾಡಿರಲಿಲ್ಲ. ಹುಣಸೂರಿನ ಜನ ನಮ್ಮನ್ನು ಒಂದು ಮಾಡಿದ್ದಾರೆ ಎನ್ನುವ ಮೂಲಕ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ನಲ್ಲೇ ಉಳಿಯುವ ಬಗ್ಗೆ ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ.
ಹುಣಸೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜಿ.ಟಿ.ದೇವೇಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿದರು. ಅಲ್ಲದೇ ಹೆಚ್ಡಿಕೆ, ಜಿಟಿಡಿ ಹಾಗೂ ಸಾ.ರಾ.ಮಹೇಶ್ ಮೂವರು ಪರಸ್ಪರರ ಕೈ ಹಿಡಿದು ಕಾರ್ಯಕ್ರಮದ ದೀಪ ಬೆಳಗಿದರು. ಜಿ.ಟಿ.ದೇವೇಗೌಡರ ನಂತರ ಅವರ ಪುತ್ರ ಜಿ.ಡಿ.ಹರೀಶ್ ಗೌಡ ಜೊತೆ ಹೆಚ್ಡಿಕೆ ಮಾತುಕತೆ ನಡೆಸಿ ಗಮನ ಸೆಳೆದರು. ಇದನ್ನೂ ಓದಿ: ದೆಹಲಿಗೆ ಹೊರಟ ಬಿಎಸ್ವೈ – ಇಂದು ಸಂಜೆ ಮೋದಿ ಭೇಟಿ
ಈ ವೇಳೆ ಸಮಾರಂಭದಲ್ಲಿ ಮಾತನಾಡಿದ ಜಿಟಿಡಿ, ನೀವು ಗಟ್ಟಿಯಾಗಿ ಜೊತೆಯಾಗಿ ಇರಿ. ಜಯಶಾಲಿಯಾಗಿ ಬನ್ನಿ ಅಂತಾ ಸ್ವಾಮೀಜಿ ಹೇಳಿದ್ದಾರೆ. ನನ್ನ ಮಗನಿಗೆ ಟಿಕೆಟ್ ಕೊಡಿ ಅಂತಾ ನಾನು ಎಂದೂ ಕುಮಾರಣ್ಣನ ಕೇಳಿಲ್ಲ ಎಂದು ತಿಳಿಸಿದರು.
ಜನತಾ ಪರಿವಾರ ಜಯಪ್ರಕಾಶ ನಾರಾಯಣ್ ಕಟ್ಟಿದ ಆಸ್ತಿ. ಈ ಪಕ್ಷ ಉಳಿಸುವ ಜವಾಬ್ದಾರಿ ಕುಮಾರಸ್ವಾಮಿ ಮೇಲಿದೆ. ಹೆಚ್.ಡಿ.ದೇವೇಗೌಡರು ಶ್ರಮದಿಂದ ಕಟ್ಟಿರುವ ಪಕ್ಷವನ್ನು ಬೆಳೆಸುವ ಜವಾಬ್ದಾರಿ ಕುಮಾರಸ್ವಾಮಿ ಅವರ ಮೇಲಿದೆ. ಜನರು ಮತ್ತು ಸ್ವಾಮೀಜಿಗಳ ಆಶೀರ್ವಾದ ನಿಮ್ಮ ಮೇಲಿದೆ ಎಂದು ಹೆಚ್ಡಿಕೆ ಅವರನ್ನು ಹಾರೈಸಿದರು. ಇದನ್ನೂ ಓದಿ: ಉತ್ತರ ಪ್ರದೇಶ, ತ್ರಿಪುರ ಬಳಿಕ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ?
ಪಕ್ಷದ ಆಂತರಿಕ ವಿಚಾರವಾಗಿ ಸಾ.ರಾ.ಮಹೇಶ್ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಜಿ.ಟಿ.ದೇವೇಗೌಡ ಅವರು ಮುನಿಸಿಕೊಂಡಿದ್ದರು. ಅನೇಕ ಬಾರಿ ಹೆಚ್ಡಿಕೆ ಭಾಗವಹಿಸುತ್ತಿದ್ದ ಕಾರ್ಯಕ್ರಮಗಳಿಗೆ ಗೈರಾಗಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪುತ್ರನಿಗೂ ಟಿಕೆಟ್ ಕೊಡಿಸಬೇಕು ಎಂದು ಜಿ.ಟಿ.ದೇವೇಗೌಡ ಯತ್ನಿಸಿದ್ದರು. ಈ ಸಂಬಂಧ ಕಾಂಗ್ರೆಸ್ ಜೊತೆಗೂ ಮಾತುಕತೆ ನಡೆಸಿದ್ದರು. ಆದರೆ ಕಾಂಗ್ರೆಸ್ನಲ್ಲಿ 2 ಟಿಕೆಟ್ ಕೊಡುವ ಭರವಸೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಜಿಟಿಡಿ ಕಾಂಗ್ರೆಸ್ ಸೇರುವ ನಿರ್ಧಾರದಿಂದ ದೂರ ಉಳಿದಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಅವರ ರಾಜಕೀಯ ನಡೆ ಕುತೂಹಲ ಮೂಡಿಸಿದೆ.