ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ನ್ಯಾಯಾಲಯ ನೇಮಿಸಿದ ಆಯೋಗ ಇಂದು ತನ್ನ ವರದಿಯನ್ನು ವಾರಣಾಸಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯನ್ನು ಆಯೋಗವು ಮುಚ್ಚಿದ ಕವರ್ನಲ್ಲಿ ಸಲ್ಲಿಸಿದ್ದು ಸರ್ವೇ ವೇಳೆ ಮಾಡಿದ ವೀಡಿಯೊಗಳು ಮತ್ತು ಛಾಯಾಚಿತ್ರಗಳಿರುವ ಚಿಪ್ ಅನ್ನು ಸಹ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ.
ಸಹಾಯಕ ನ್ಯಾಯಾಲಯದ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ಈ ವರದಿಯನ್ನು ಸಲ್ಲಿಕೆ ಮಾಡಿದ್ದು, ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯು 10-15 ಪುಟಗಳಿಂದ ಕೂಡಿದ್ದು, ದಾಖಲೆಗಳ ಸಹಿತ ಕೋರ್ಟ್ಗೆ ಸಲ್ಲಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್ ವಿಚಾರಣೆಗೆ ಸುಪ್ರೀಂ ತಡೆ
ವರದಿಯಲ್ಲಿ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ, ಇದಲ್ಲದೆ ಮಸೀದಿಗೆ ಗೋಡೆಗಳ ಮೇಲೆ ತಾವರೆ ಹೂವು, ತ್ರಿಶೂಲ, ಢಮರುಗ, ನಾಗಸರ್ಪ ಸೇರಿದಂತೆ ಹಲವು ಹಿಂದೂ ಸಂಸ್ಕೃತಿ ಹೊಂದಿರುವ ಚಿತ್ರಗಳಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.
ವಾರಣಾಸಿಯ ಕೋರ್ಟ್ ಈ ಹಿಂದೆ ಮೂರು ದಿನಗಳ ಕಾಲ ಮಸೀದಿಯಲ್ಲಿ ವೀಡಿಯೋಗ್ರಫಿ ಸಹಿತ ಸರ್ವೆ ನಡೆಸಲು ಅನುಮತಿ ನೀಡಿತ್ತು. ಅನುಮತಿ ಹಿನ್ನಲೆ ಸ್ಥಳೀಯ ಜಿಲ್ಲಾಡಳಿತ ಅರ್ಜಿದಾರರ ಸಮ್ಮುಖದಲ್ಲಿ ಸರ್ವೇ ನಡೆಸಿ ಇಂದು ತನ್ನ ವರದಿಯನ್ನು ಸಲ್ಲಿಸಿದೆ. ಈಗ ಸಲ್ಲಿಕೆಯಾಗಿರುವ ವರದಿ ಆಧರಿಸಿ ಮುಂದಿನ ಹಂತದ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಕಲ್ಲು ತೂರಾಟ